ಶಿಕ್ಷಣಕ್ಕೆ ಒತ್ತು ನೀಡದಿರುವುದು ನೋವಿನ ಸಂಗತಿ: ಸಿ.ಎನ್.ಆರ್.ರಾವ್

Update: 2019-03-23 17:51 GMT

ಬೆಂಗಳೂರು, ಮಾ.23: ನಾನು ಐದು ಮಂದಿ ಪ್ರಧಾನ ಮಂತ್ರಿಗಳ ಜತೆ ಕೆಲಸ ಮಾಡಿದ್ದೇನೆ. ಅವರಿಂದ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಆಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಭಾರತರತ್ನ ಸಿ.ಎನ್.ಆರ್.ರಾವ್ ಬೇಸರ ವ್ಯಕ್ತಪಡಿಸಿದರು.

ಶನಿವಾರ ಚಾಮರಾಜಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಒಟ್ಟಾರೆ ಜಿಡಿಪಿಯಲ್ಲಿ ಶೇ.3.5ರಷ್ಟು ಮಾತ್ರ ಶಿಕ್ಷಣಕ್ಕೆ ಹಣ ಮೀಸಲಿಡಲಾಗುತ್ತಿದೆ. ಶಿಕ್ಷಣಕ್ಕೆ ಶೇ.6ರಷ್ಟು ಹಣ ಮೀಸಲಿಡಬೇಕು ಎಂಬುದು ನನ್ನ ಆಶಯ. ಅಷ್ಟೇ ಅಲ್ಲ ವಿಜ್ಞಾನಕ್ಕೆ ಶೇ.0.9ರಷ್ಟು ಮಾತ್ರ ಹಣ ನೀಡಲಾಗುತ್ತಿದೆ. ಇದರಿಂದ ಸಂಶೋಧನೆಗಳು ಹೇಗೆ ನಡೆಯುತ್ತವೆ? ಎಂದು ಪ್ರಶ್ನಿಸಿದರು.

ಹೆಚ್ಚು ಹಣ ಸಂಪಾದಿಸುವ ಆಸೆಯೊಂದಿಗೆ ಐಟಿ ಉದ್ಯಮ ಅರಸಿ ಹೋಗುವ ಬೆಂಗಳೂರಿನ ಯುವಜನರು ಅಷ್ಟೇ ವೇಗವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಖೇದದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿ, ಬೆಂಗಳೂರಿಗರು ವಿಜ್ಞಾನದಿಂದ ಹಿಂದೆ ಸರಿದರೂ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರವನ್ನು ಅರಸಿ ಬರುತ್ತಿರುವುದು ಆಶಾದಾಯಕ ಸಂಗತಿಯಾಗಿದೆ ಎಂದು ತಿಳಿಸಿದರು.

ದೇಶದ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ವಿಜ್ಞಾನ ಕ್ಷೇತ್ರಕ್ಕೆ ಒತ್ತು ಕೊಡುತ್ತಿರುವವರು ಮಾತೃಭಾಷೆ ಕನ್ನಡದಲ್ಲಿ ಕಲಿತ ಗ್ರಾಮೀಣರೇ ಹೊರತು ಇಂಗ್ಲಿಷ್ ಮಾಧ್ಯಮದವರಲ್ಲ. ನಾನು ಕೂಡ ಕನ್ನಡ ಮಾಧ್ಯಮದಲ್ಲೇ ಓದಿದವನು. ನಮ್ಮ ತಾತ ಕನ್ನಡದ ಶಿಕ್ಷಕರು ಎಂದು ನುಡಿದ ಅವರು, ಭಾರತದ ಭವಿಷ್ಯ ಅಡಗಿರುವುದು ಹಳ್ಳಿ ಮಕ್ಕಳಲ್ಲಿ. ಹೀಗಾಗಿಯೇ ನಾನು ಮತ್ತು ನನ್ನ ಪತ್ನಿ ದೇಶದ ನಾನಾ ಭಾಗಗಳಿಗೆ ತೆರಳಿ ಗ್ರಾಮೀಣ ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುತ್ತಿದ್ದೇವೆ. ನಮ್ಮಲ್ಲಿ ಹಣ ಇಲ್ಲ. ಆದರೆ, ಇರುವ ಬುದ್ಧಿ, ಜ್ಞಾನವನ್ನು ಧಾರೆ ಎರೆಯುತ್ತಿದ್ದೇವೆ ಎಂದರು.

ಬೆಂಗಳೂರಿನಲ್ಲಿ ತಲೆ ಎತ್ತುತ್ತಿರುವ ಬಹುಮಹಡಿ ಕಟ್ಟಡಗಳನ್ನು ನೋಡಿದರೆ ಭಯವಾಗುತ್ತದೆ. ಇಲ್ಲಿನ ವಾಯುಮಾಲಿನ್ಯ ತೀರಾ ಹದಗೆಟ್ಟಿದ್ದು, ಬೆಂಗಳೂರು ಹೊಸದಿಲ್ಲಿಯ ಹಾದಿ ತುಳಿಯುತ್ತಿದೆ. ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ. ಸಂಚಾರ ಸಮಸ್ಯೆ ಅಗಾಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಆದರೂ ನನಗೆ ಬೆಂಗಳೂರು ಇಷ್ಟ. ಇಂದಿನ ಜನ ಮೊಬೈಲ್ ಬಳಕೆಯಲ್ಲಿ ಮುಳುಗಿದ್ದಾರೆ. ಇದರಿಂದ ಎಷ್ಟು ಸಮಯ ವ್ಯರ್ಥವಾಗುತ್ತಿದೆ ಎಂಬುದನ್ನು ಯಾಕೆ ಯಾರೂ ಅರಿಯುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ನಾನು ಮೊಬೈಲ್‌ನಿಂದ ದೂರವಿದ್ದೇನೆ ಎಂದು ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು.

ರಾಷ್ಟ್ರೀಯ ಭಾವನೆ ಕಡಿಮೆಯಾಗುತ್ತಿದೆ: ವಿಜ್ಞಾನ ಮತ್ತು ಶಿಕ್ಷಣದಲ್ಲಿ ಚೀನಾ ಭಾರತಕ್ಕಿಂತ ಹೆಚ್ಚು ಮುಂದಿದೆ. ಯಾಕೆಂದರೆ ಅವರು ಈ ಎರಡೂ ಕ್ಷೇತ್ರಗಳಿಗೆ ವಿಶೇಷ ಒತ್ತು ಮತ್ತು ಹಣ ಮೀಸಲಿಡುತ್ತಿದ್ದಾರೆ. ಚೀನಾವನ್ನು ಮೀರಿಸಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ದುಡಿಯಬೇಕು. ಆಗ ಮುಂದಿನ 10 ವರ್ಷಗಳಲ್ಲಿ ಭಾರತ ವಿಜ್ಞಾನದಲ್ಲಿ ಮುಂದಿರಲು ಸಾಧ್ಯ ಎಂದು ಸಲಹೆ ನೀಡಿದರು. ಭಾರತೀಯರಲ್ಲಿ ರಾಷ್ಟ್ರೀಯ ಭಾವನೆ ಕಡಿಮೆಯಾಗುತ್ತಿದ್ದು, ಚೀನಾದಲ್ಲಿ ಇದು ಹೆಚ್ಚಾಗಿದೆ. ನಮ್ಮಲ್ಲಿ ರಾಷ್ಟ್ರಪ್ರೇಮ ಹೆಚ್ಚಿಸುವ ಕೆಲಸ ಆಗಬೇಕು ಎಂದು ಇದೇ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ್, ಪದಾಧಿಕಾರಿಗಳಾದ ಪಿ.ಮಲ್ಲಿಕಾರ್ಜುನಪ್ಪ, ವ.ಚ.ಚನ್ನೇಗೌಡ ಉಪಸ್ಥಿತರಿದ್ದರು.

ನಾನೆಂದೂ ಪ್ರಶಸ್ತಿಗಳನ್ನು ಅರಸಿ ಹೋಗಲಿಲ್ಲ. ಆದರೂ ಭಾರತರತ್ನ ಸಿಕ್ಕಿದೆ. ನೊಬೆಲ್ ಪ್ರಶಸ್ತಿಗೆ ಸಾಕಷ್ಟು ಬಾರಿ ನನ್ನ ಹೆಸರು ಹೋಗಿದೆ. ಆದರೆ ಇನ್ನೂ ಸಿಕ್ಕಿಲ್ಲ. ಆ ಪ್ರಶಸ್ತಿ ಸಿಕ್ಕರೆ ನಾನು ಖುಷಿ ಪಡುತ್ತೇನೆ.

-ಸಿ.ಎನ್.ಆರ್.ರಾವ್, ಖ್ಯಾತ ವಿಜ್ಞಾನಿ, ಭಾರತರತ್ನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News