ಲೋಕಸಭಾ ಚುನಾವಣೆಗೆ ಮುಂಜಾಗ್ರತೆ: ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ
Update: 2019-03-23 18:28 GMT
ಬೆಂಗಳೂರು, ಮಾ.23: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರದ ಈಶಾನ್ಯ ಹಾಗೂ ಆಗ್ನೇಯ ವಿಭಾಗದ ರೌಡಿ ಪಟ್ಟಿಯಲ್ಲಿರುವವರು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಪರೇಡ್ ನಡೆಸಲಾಯಿತು.
ಶನಿವಾರ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ನೇತೃತ್ವದಲ್ಲಿ 11 ಠಾಣಾ ವ್ಯಾಪ್ತಿಯ 439 ರೌಡಿಗಳ ಪರೇಡ್ ನಡೆಸಿ, ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರದಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರಣವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅದೇ ರೀತಿ, ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್ ಅವರು, ಇಲ್ಲಿನ ಸಿಎಆರ್ ಸೌತ್ ಮೈದಾನದಲ್ಲಿ 300 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಯಾವುದೇ ನಿರ್ದಿಷ್ಟ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮತದಾರರಿಗೆ ಭೀತಿ ಹುಟ್ಟಿಸಿದರೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ರೌಡಿಗಳಿಗೆ ಎಚ್ಚರಿಸಿದರು.