ಆರೆಸ್ಸೆಸ್ ಕಚೇರಿಗೆ ನೀಡಿದ್ದ ಭದ್ರತೆ ವಾಪಸ್ ಪಡೆದಿರುವ ಕ್ರಮ ನ್ಯಾಯಸಮ್ಮತವಲ್ಲ: ದಿಗ್ವಿಜಯ ಸಿಂಗ್
ಭೋಪಾಲ್, ಎ.2: ಆರೆಸ್ಸೆಸ್ ನ ಭೋಪಾಲ್ ಕಚೇರಿಗೆ ನೀಡಿದ್ದ ಭದ್ರತೆ ವಾಪಾಸು ಪಡೆದ ಮಧ್ಯಪ್ರದೇಶ ಸರ್ಕಾರದ ಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಪ್ರಶ್ನಿಸಿದ್ದಾರೆ.
ಕಚೇರಿಗೆ ನೀಡಿದ್ದ ಭದ್ರತೆಯನ್ನು ತಕ್ಷಣ ಪುನರಾರಂಭಿಸುವಂತೆ ಅವರು ಮುಖ್ಯಮಂತ್ರಿ ಕಮಲನಾಥ್ ಅವರನ್ನು ಒತ್ತಾಯಿಸಿದ್ದಾರೆ.
"ಆರೆಸ್ಸೆಸ್ ಕಚೇರಿಗೆ ನೀಡಿದ್ದ ಭದ್ರತೆಯನ್ನು ವಾಪಾಸು ಪಡೆದಿರುವ ಕ್ರಮ ನ್ಯಾಯಸಮ್ಮತವಲ್ಲ; ಕಚೇರಿಗೆ ಮತ್ತೆ ಸೂಕ್ತ ಭದ್ರತೆ ಒದಗಿಸುವಂತೆ ಆದೇಶಿಸಬೇಕು" ಎಂದು ಅವರು ಕಮಲನಾಥ್ ಅವರಿಗೆ ಮನವಿ ಮಾಡಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ಭೋಪಾಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.
ಸೋಮವಾರ ರಾತ್ರಿ ದಿಢೀರನೇ ಆರೆಸ್ಸೆಸ್ ಕಚೇರಿಗೆ ನೀಡಿದ್ದ ಭದ್ರತೆ ವಾಪಾಸು ಪಡೆಯಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜಿಸಲಾಗಿದ್ದು, ಪೊಲೀಸ್ ಡೇರೆ ತೆರೆವುಗೊಳಿಸಲಾಗಿದೆ. ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಗೋಪಾಲ್ ಭಾರ್ಗವ ಕೂಡಾ ಟೀಕಿಸಿದ್ದಾರೆ.