ಗಾಯಾಳು ಪತ್ರಕರ್ತರ ನೆರವಿಗೆ ಧಾವಿಸಿದ ರಾಹುಲ್, ಪ್ರಿಯಾಂಕಾ

Update: 2019-04-04 15:22 GMT

ವಯನಾಡ್,ಎ.4: ಕೇರಳದ ವಯನಾಡ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಚುನಾವಣಾ ಅಭಿಯಾನ ಮತ್ತು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸ್ಥಳದಲ್ಲಿ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಗಾಯಗೊಂಡ ಪತ್ರಕರ್ತರಿಗೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೆರವು ನೀಡಿದರು.

ರಾಹುಲ್ ಗಾಂಧಿ ರೋಡ್‌ಶೋ ವೇಳೆ ಬ್ಯಾರಿಕೇಡ್ ಮುರಿದುಬಿದ್ದ ಪರಿಣಾಮ ಕೆಲ ಮಾಧ್ಯಮ ಪ್ರತಿನಿಧಿಗಳು ವಾಹನದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಇನ್ನೊಂದು ವಾಹನದಲ್ಲಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡಲೇ ವಾಹನದಿಂದ ಇಳಿದುಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು. ರಾಹುಲ್ ಗಾಂಧಿ ಗುರುವಾರ ವಯನಾಡ್‌ನಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಆಗಮಿಸಿದ ರಾಹುಲ್ ನೇರವಾಗಿ ಕಲ್ಪೆಟ್ಟದ ಜಿಲ್ಲಾ ಕಲೆಕ್ಟರ್ ಕಚೇರಿಯತ್ತ ತೆರಳಿದರು. ನಾಮಪತ್ರ ಸಲ್ಲಿಕೆಯ ನಂತರ ನಡೆದ ರೋಡ್‌ಶೋನಲ್ಲಿ ಬೃಹತ್ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ರಾಹುಲ್-ಪ್ರಿಯಾಂಕಾರತ್ತ ಕೈಬೀಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ವಯನಾಡ್ ಜೊತೆಗೆ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಠಿಯಿಂದಲೂ ಚುನಾವಣಾ ಕಣಕ್ಕಿಳಿದಿದ್ದಾರೆ. ವಯನಾಡ್‌ನಲ್ಲಿ ಎಪ್ರಿಲ್ 23ರಂದು ಮತದಾನ ನಡೆಯಲಿದ್ದರೆ ಅಮೇಠಿಯಲ್ಲಿ ಮೇ 6ರಂದು ಜನರು ಮತದಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News