ನಾನು ಎಡವೂ ಅಲ್ಲ, ಬಲವೂ ಅಲ್ಲ ಜನಪರ: ಪ್ರಕಾಶ್ ರಾಜ್

Update: 2019-04-11 13:29 GMT

ಬೆಂಗಳೂರು, ಎ.11: ನಾನು ಎಡವೂ ಅಲ್ಲ, ಬಲವೂ ಅಲ್ಲ ಜನಪರವಾಗಿದ್ದೇನೆ. ನಮಗೇಕೆ ಬೇಕು ಇವೆಲ್ಲ. ದೇಶದ ಬಗ್ಗೆ ಮಾತನಾಡೋಣ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ತಿಳಿಸಿದರು.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಹಿಂದೂ ವಿರೋಧಿಯಲ್ಲ. ಹಿಂದೂ-ಮುಸ್ಲಿಂ ಭೇದ ಭಾವವಿಲ್ಲ. ಎಲ್ಲ ಧರ್ಮಗಳಲ್ಲೂ ವಿಕೃತ ಮನಸ್ಸುಗಳಿರುತ್ತವೆ. ಎಡ-ಬಲ ನಮಗೇಕೆ ಬೇಕು. ದೇಶದ ಬಗ್ಗೆ ಮಾತನಾಡೋಣ. ಯಾವ ರಾಜಕೀಯ ಪಕ್ಷದಲ್ಲೂ ಜಾತ್ಯತೀತತೆ ಇಲ್ಲ. ನಮ್ಮನ್ನೂ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ವಿಷಾದಿಸಿದರು.

ಈಗಿನ ಪ್ರಜಾತಂತ್ರ ರಾಜಕಾರಣ ವ್ಯವಸ್ಥೆಯನ್ನು ಬದಲಿಸುವ ಪರ್ಯಾಯ ರಾಜಕಾರಣಕ್ಕೆ ದೇಶದಲ್ಲಿ ನಾಂದಿ ಹಾಡುವ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆಯೇ ಹೊರತು ಯಾವುದೇ ಪಕ್ಷಕ್ಕೆ ನೆರವಾಗಲು, ಸ್ಪರ್ಧೆ ಮಾಡಿಲ್ಲ. ಅಲ್ಲದೆ, ಜನರ ಘನತೆಯನ್ನು ಕಾಪಾಡಬೇಕಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಈಗಿರುವ ವ್ಯವಸ್ಥೆಯನ್ನು ಬದಲಿಸಿ, ಜನಪರ ವ್ಯವಸ್ಥೆಯನ್ನು ಜಾರಿಗೊಳಿಸುವ ಪರ್ಯಾಯ ರಾಜಕಾರಣ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ, ಯಾವ ರಾಜಕೀಯ ಪಕ್ಷದ ಪರವಾಗಿಯೂ ನಾನು ಇಲ್ಲ, ನಾನು ನನ್ನದೇ ಆದ ಯೋಚನೆ, ಅಭಿವೃದ್ಧಿ, ವ್ಯವಸ್ಥೆಯ ಬದಲಾವಣೆ ಎಲ್ಲವನ್ನೂ ಕಳೆದ 6 ತಿಂಗಳಿಂದ ಜನರಿಗೆ ಅವರದೇ ಆದ ಭಾಷೆಯಲ್ಲಿ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಇದು ಕಷ್ಟದ ಹಾದಿ ನಿಜ. ಆದರೆ ಪರ್ಯಾಯ ರಾಜಕಾರಣದಲ್ಲಿ ಯಶಸ್ವಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರ್ಯಾಯ ರಾಜಕಾರಣದ ಮಾತನಾಡುತ್ತಿರುವ ನಾನು ಯಾವುದೇ ಪಕ್ಷ ಸೇರಿದರೆ ಜನರ ನಂಬಿಕೆಗೆ ದ್ರೋಹ ಬಗೆದಂತೆ ಆಗುತ್ತದೆ. ಬೇರೆ ಪಕ್ಷ ಸೇರಿದರೆ ನನ್ನ ರಾಜಕೀಯ ಹಾದಿ ಸುಲಭವಾಗುತ್ತದೆ ನಿಜ, ಆದರೆ, ನಾನು ಕೂಡ ಅವರಂತೆಯೇ ಆಗುತ್ತೇನೆ. ಯಾವುದೇ ಕಾರಣಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೂ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಲಂಕೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರು ಮನುಷ್ಯ ಧರ್ಮದ ಬಗ್ಗೆ ಹೇಳಿಕೊಟ್ಟಿದ್ದಾರೆ. ಗೌರಿ ಲಂಕೇಶ್ ಹತ್ಯೆ ನನ್ನಲ್ಲಿ ಮನುಷ್ಯತ್ವದ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು ನಿಜ. ಆದರೆ, ಈ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವುದಕ್ಕೂ ಗೌರಿ ಸಾವಿಗೂ ಸಂಬಂಧವಿಲ್ಲ. ಅಲ್ಲದೆ, ನಾನು ರಾಜಕೀಯ ನಿವೃತ್ತಿಯಾಗುವ ಮೊದಲು ಜನಪರವಾದ ನೂರು ನಾಯಕರನ್ನಾದರೂ ಬೆಳೆಸಿ ಹೋಗಬೇಕು, ನನಗೆ ಹಸಿವಿನ ತೊಂದರೆಯಿಲ್ಲ. ಹಸಿವು ಇರುವವರ ಹಸಿವು ನೀಗಿಸಬೇಕು ಎಂದು ಭಾವುಕರಾದರು.

ಬೆಂಗಳೂರು ಕೇಂದ್ರದಿಂದ ಏಕೆ ಸ್ಪರ್ಧಿಸುತ್ತಿದ್ದೇನೆ ಎಂದರೆ, ಈ ಕ್ಷೇತ್ರ ಮಿನಿ ಭಾರತ ಇದ್ದಂತೆ. ಇಲ್ಲಿ ದೇಶದಲ್ಲಿರುವ ಎಲ್ಲ ಜಾತಿ, ಧರ್ಮ, ಭಾಷೆಗಳನ್ನಾಡುವ ಜನರಿದ್ದಾರೆ. ಅಲ್ಲದೆ, ದೇಶದ ಎಲ್ಲ ರಾಜ್ಯದಿಂದಲೂ ಇಲ್ಲಿಗೆ ವಲಸೆ ಬಂದು ಜೀವನ ರೂಪಿಸಿಕೊಂಡು ಜಾತ್ಯತೀತವಾಗಿ ಬದುಕುತ್ತಿದ್ದಾರೆ. ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಜನ ಗೆಲ್ಲುತ್ತಾರೆ. ಮಾಡಿಲ್ಲವಾದರೆ ಜನ ಸೋಲುತ್ತಾರೆ. ಅಲ್ಲದೆ, ಯಾವಾಗಲೂ ಆಡಳಿತ ಪಕ್ಷದ ನ್ಯೂನತೆಗಳನ್ನು ವಿರೋಧಿಸಬೇಕು ಎಂದು ತಿಳಿಸಿದರು.

ರಾಜಧಾನಿಯಲ್ಲಿ ಎರಡು ಸಾವಿರ ಸ್ಲಂಗಳಿವೆ, ಅನೇಕ ಸಮಸ್ಯೆಗಳಿವೆ, ನಾವು ಕಟ್ಟಿದ ತೆರಿಗೆಯಿಂದ ಸರಕಾರಿ ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ನಿರ್ವಹಿಸಲಾಗುತ್ತಿದೆ. ಆದರೆ ಅವುಗಳಲ್ಲಿ ಗುಣಮಟ್ಟವಿಲ್ಲ. ಏಕೆ ಹೀಗೆ? ಬಿಬಿಎಂಪಿ ನೀರು ಸರಬರಾಜನ್ನೇ ಮಾಫಿಯವಾಗಿ ಮಾಡಿಕೊಂಡಿದೆ. ಇದಾಗಿರುವುದು ನಾವು ಆಯ್ಕೆ ಮಾಡಿದ ನಾಯಕರಿಂದ ಅಲ್ಲವೇ ಎಂದು ಪ್ರಶ್ನಿಸಿದರು.

ರಾಜಕೀಯ ಪಕ್ಷಗಳ ಲೆಕ್ಕಾಚಾರವೇ ಬೇರೆ: ಚುನಾವಣೆಗಳು ವಿಷಯಾಧಾರಿತವಾಗಿ ನಡೆಯುತ್ತಿಲ್ಲ. ವ್ಯಕ್ತಿಯಾಧಾರಿತ, ಪಕ್ಷಾಧಾರಿತ, ಜಾತಿಯಾಧಾರಿತ ಚುನಾವಣೆಗಳಾಗುತ್ತಿವೆ. ರಾಜಕೀಯ ಪಕ್ಷಗಳ ಲೆಕ್ಕಾಚಾರವೇ ಬೇರೆ ಇದೆ. ಎಲ್ಲ ಪಕ್ಷಗಳು ತಮ್ಮದೇ ಆದ ಧರ್ಮಾಧಾರಿತ, ಜಾತಿಯಾಧಾರಿತ ಲೆಕ್ಕಾಚಾರವನ್ನು ಹೊಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ: ಚುನಾವಣೆಯಲ್ಲಿ ಪಡೆಯುವ ಮತದಲ್ಲಿ ಶೇ.10 ರಿಂದ 15ರಷ್ಟು ಮತ ಹಣ ನೀಡಿ ಖರೀದಿಸುವ ಮತಗಳಾಗಿವೆ. ಇವೆಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಗಮನಿಸಿದರೆ, ಆ ಪ್ರಣಾಳಿಕೆಯವರು ದಾನ-ಧರ್ಮ ಮಾಡುವ ದತ್ತಿ ಸಂಸ್ಥೆಯ ಪ್ರಣಾಳಿಕೆಯಂತಿದೆ ಎಂದು ವ್ಯಂಗ್ಯವಾಡಿದರು.

ಎಲ್ಲ ರಾಜಕೀಯ ಪಕ್ಷಗಳು ಒಂದೇ, ಯಾವುದೇ ರಾಜಕೀಯ ಪಕ್ಷಗಳಿಗೆ ಜನಪರ ಸಿದ್ಧಾಂತವಾಗಲಿ, ನೀತಿ-ನಿಲುವುಗಳಾಗಲಿ ಇಲ್ಲ. ತಮ್ಮ ಪರ್ಯಾಯ ರಾಜಕಾರಣಕ್ಕೆ ಗೆಲುವು ಇದ್ದೇ ಇದೆ. ಇದು ಚಳವಳಿಯಾಗಿ ರೂಪುಗೊಂಡು ದೇಶದಲ್ಲಿ ಮುಂದೊಂದು ದಿನ ಪರ್ಯಾಯ ರಾಜಕಾರಣ ಸ್ಥಾಪನೆಯಾಗಲಿದೆ.
-ಪ್ರಕಾಶ್ ರಾಜ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News