ನನಗೆ ಮತ ನೀಡದೇ ಇದ್ದರೆ, ನಿಮಗೆ ಪಾಪಗಳನ್ನು ಹಿಂದಿರುಗಿಸುತ್ತೇನೆ: ಸಾಕ್ಷಿ ಮಹಾರಾಜ್

Update: 2019-04-13 06:44 GMT

ಉನ್ನಾವೋ : "ನೀವು ನನ್ನ ಪರವಾಗಿ ಮತ ಚಲಾಯಿಸದೇ ಇದ್ದರೆ, ಅದಕ್ಕೆ ಬದಲಾಗಿ ನಿಮಗೆ ಪಾಪ ದೊರೆಯುತ್ತದೆ,'' ಎಂದು ಬಿಜೆಪಿಯ ಸ್ಥಳೀಯ ಸಂಸದ ಹಾಗೂ ಪಕ್ಷದ ಅಭ್ಯರ್ಥಿ ಸಾಕ್ಷಿ ಮಹರಾಜ್ ಶುಕ್ರವಾರ ಮತದಾರರಿಗೆ ಹೇಳಿದ್ದಾರೆ.

"ನಾನೊಬ್ಬ ಸಂತ. ಒಬ್ಬ ಸನ್ಯಾಸಿ ಏನಾದರೂ ಕೇಳಿದರೆ ಹಾಗೂ ಅದನ್ನು ಆತನಿಗೆ ನೀಡದೇ ಇದ್ದರೆ ಆತ ಎಲ್ಲಾ ಉತ್ತಮ ಕಾರ್ಯಗಳನ್ನು ಪಡೆದು ಪಾಪಗಳನ್ನು ಹಿಂದಿರುಗಿಸುತ್ತಾನೆ ಎಂದು ಶಾಸ್ತ್ರಗಳಲ್ಲಿ ಬರೆದಿದೆ,'' ಎಂದು ತಮ್ಮ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದ್ದಾರೆ.

ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಪ್ರಸಿದ್ಧಿ ಪಡೆದಿರುವ ಮಹಾರಾಜ್ "ನಾನೇನು ನಿಮ್ಮ ಆಸ್ತಿ ಕೇಳುತ್ತಿಲ್ಲ. 125 ಕೋಟಿ ಭಾರತೀಯ ಭವಿಷ್ಯವನ್ನು ನಿರ್ಧರಿಸುವ ನಿಮ್ಮ ಮತವನ್ನಷ್ಟೇ ಕೇಳುತ್ತಿದ್ದೇನೆ,'' ಎಂದರು.

"ಮೋದಿ ಸುನಾಮಿಯಿಂದಾಗಿ 2019ರ ಚುನವಣೆಯ ನಂತರ ಮತ್ತೆ ಚುನಾವಣೆಗಳ ಅಗತ್ಯವಿರುವುದಿಲ್ಲ'' ಎಂದು ಹೇಳುವ ಮೂಲಕ ಕಳೆದ ತಿಂಗಳು ಸಾಕ್ಷಿ ಮಹಾರಾಜ್ ವಿವಾದಕ್ಕೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News