ಹಸಿರು ಬೆಂಗಳೂರಿಗಾಗಿ ಹಲವು ಯೋಜನೆ: ಬಿ.ಕೆ.ಹರಿಪ್ರಸಾದ್

Update: 2019-04-13 16:44 GMT

ಬೆಂಗಳೂರು, ಎ.13: ಬೆಂಗಳೂರು ನಗರವನ್ನು ಇನ್ನಷ್ಟು ಹಸಿರುಗೊಳಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಹಸಿರು ಬೆಂಗಳೂರಿಗಾಗಿ ಈಗಿರುವ ಉದ್ಯಾನವನಗಳ ಅಭಿವೃದ್ಧಿ, ಲಾಲ್‌ಬಾಗ್ ಮಾದರಿಯ ನೂತನ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಶನಿವಾರ ಜಯನಗರದ ಸಾವಯವ ಹೊಟೇಲ್‌ನಲ್ಲಿ ಪರಿಸರವಾದಿಗಳೊಂದಿಗೆ ‘ಪರಿಸರವಾದದೊಂದಿಗೆ ಪ್ರಜಾಪ್ರಭುತ್ವ’ದ ಬಗ್ಗೆ ನಡೆಸಿದ ಚರ್ಚೆಯಲ್ಲಿ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ಸಾಲು ಮರಗಳನ್ನು ನೆಡುವುದು, ಈಗಿರುವ ಮರಗಳ ಸೂಕ್ತ ಆರೈಕೆ, ಸ್ಯಾಂಕಿ ಕರೆ ಮಾದರಿಯಲ್ಲಿ ಕ್ಷೇತ್ರದ ಕೆರೆಗಳ ಅಭಿವೃದ್ಧಿ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಬೆಂಗಳೂರಿನ ಪರಿಸರವನ್ನು ಕಾಪಾಡುವುದು ನಮ್ಮ ಪ್ರಥಮ ಆದ್ಯತೆ ಆಗಿರಲಿದೆ. ಈಗಿನ ವಾಯುಮಾಲಿನ್ಯ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಕಡಿಮೆಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹೀಗಾಗಿ ನಗರದ ಸೌಂದರ್ಯ ಹಾಗೂ ಮರಗಳನ್ನು ನೆಡುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಿದ್ದೇನೆ ಎಂದು ಹರಿಪ್ರಸಾದ್ ಹೇಳಿದರು.

ಪರಿಸರವಾದಿಗಳ ಸಭೆಯಲ್ಲಿ ಚಿತ್ರ ನಿರ್ದೇಶಕ ಅಪೂರ್ವ ಕಾಸರವಳ್ಳಿ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ, ನೃತ್ಯ ಕಲಾವಿದೆ ವಂದನಾ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಪರಿಸರವಾದಿ ಡಾ.ಆರ್.ಎಚ್. ಸಾಹುಕಾರ್, ರಾಮಕೃಷ್ಣ ಭಟ್, ಸಿ.ಯತಿರಾಜ್, ಸಮಾಜವಾದಿ ಚಿಂತಕ ಜಿ.ಸುಂದರ್, ಸಾವಯವ ಕೃಷಿಕರಾದ ಜಯರಾಂ ಭಾಗವಹಿಸಿದ್ದರು. ನಂತರ ಬಿ.ಕೆ.ಹರಿಪ್ರಸಾದ್, ಬಸವನಗುಡಿಯ ಹನುಮಂತನಗರದಲ್ಲಿ ಬೃಹತ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ ಆಶೀರ್ವಾದ ಪಡೆದು ರ್ಯಾಲಿಗೆ ಚಾಲನೆ ನೀಡಲಾಯಿತು. ಮರಾಠ ಹಾಸ್ಟೆಲ್‌ನಲ್ಲಿ ನಡೆದ ಕಮ್ಮ ನಾಯ್ಡು ಸಮುದಾಯದ ನಾಯಕರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News