ಚುನಾವಣೆ ಎದುರಿಸಲು ಧೈರ್ಯವಿಲ್ಲದೆ ಸುಳ್ಳು ಆರೋಪ: ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ
Update: 2019-04-14 15:44 GMT
ಬೆಂಗಳೂರು, ಎ. 14: ಕಾಂಗ್ರೆಸ್ ಮುಖಂಡರಿಗೆ ರಾಜಮಾರ್ಗದಲ್ಲಿ ಚುನಾವಣೆ ಎದುರಿಸಲು ಧೈರ್ಯವಿಲ್ಲ. ಜನತೆ ಬಿಜೆಪಿ ಬಗ್ಗೆ ತೋರಿಸುತ್ತಿರುವ ಪ್ರೀತಿ ನೋಡಿ ಅವರಿಗೆ ಹೆದರಿಕೆ ಆಗಿದೆ. ಹೀಗಾಗಿ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ಬೊಮ್ಮನಹಳ್ಳಿಯಲ್ಲಿ ಮಾತನಾಡಿದ ಅವರು, ಇಂತಹ ನೂರು ರೀತಿ ಆರೋಪ ಮಾಡಿದರೂ ಎದುರಿಸುವ ಶಕ್ತಿ ಜೊತೆಗೆ ನಮ್ಮ ನಾಯಕರ ಆಶೀರ್ವಾದ ನನ್ನೊಂದಿಗಿದೆ. ಜನರ ಪ್ರೀತಿಯೊಂದಿಗೆ ಪ್ರಧಾನಿ ಮೋದಿಯವರ ಶ್ರೀರಕ್ಷೆ ನನಗಿದೆ ಎಂದರು. ಈ ರೀತಿಯ ಕ್ಷುಲ್ಲಕ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಕಾನೂನಿನ ಮೊರೆ ಹೋಗುವ ಬಗ್ಗೆ ಹಿರಿಯ ನಾಯಕರಿಂದ ಮಾರ್ಗದರ್ಶನ ಪಡೆಯುತ್ತೇನೆ. ಕಾಂಗ್ರೆಸ್ ಪಕ್ಷದ ಅಸಹ್ಯ ರಾಜಕೀಯ ಹೇಗೆಲ್ಲ ನಡೆಯುತ್ತದೆ ಎಂದು ಎಪ್ಪತ್ತು ವರ್ಷಗಳಿಂದ ಜನತೆ ನೋಡಿದ್ದಾರೆ. ಇದಕ್ಕೆ ಮತದಾರರೇ ಉತ್ತರ ನೀಡಲಿದ್ದಾರೆ ಎಂದರು.