ಕರ್ನಾಟಕ ನಕ್ಸಲ್ ಮುಕ್ತ: ನೀಲಮಣಿ ಎನ್.ರಾಜು

Update: 2019-04-16 17:59 GMT

ಬೆಂಗಳೂರು, ಎ.16: ಎಂಟು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಿಂದ ಕರ್ನಾಟಕ ಮುಕ್ತವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಇಂದಿಲ್ಲಿ ಹೇಳಿದರು.

ಮಂಗಳವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018ನೇ ಸಾಲಿನಲ್ಲಿ ಚಿಕ್ಕಮಗಳೂರು, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಆದರೆ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಎಂದು ನುಡಿದರು.

ನಕ್ಸಲರು ಯಾವುದೇ ಪ್ರತಿಭಟನೆ, ಕರಪತ್ರ ಹಂಚುವಿಕೆ, ಚುನಾವಣಾ ವಿರೋಧಿ ಹೇಳಿಕೆಗಳಂತಹ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಿರುವ ಬಗ್ಗೆ ವರದಿಯಾಗಿರುವುದಿಲ್ಲ. ಕರ್ನಾಟಕದ ಮಲೆನಾಡು ಪ್ರದೇಶ, ಕೇರಳ ಹಾಗೂ ತಮಿಳುನಾಡು ಸಂಪರ್ಕಿಸುವ ತ್ರಿಸಂಧಿ ಪ್ರದೇಶದಲ್ಲಿ ಕ್ಷೇತ್ರ ಪ್ರಾಬಲ್ಯ ಸಾಧಿಸುವ ಸಲುವಾಗಿ ದಿನನಿತ್ಯ ಕಾರ್ಯಾಚರಣೆ ಮಾಡಲಾಗಿದೆ ಹಾಗೂ ರಾತ್ರಿ ವೇಳೆ ಗಸ್ತು ಕ್ರಮ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಈ ವ್ಯಾಪ್ತಿಗಳಲ್ಲಿ ನಡೆಯುವ ಚುನಾವಣಾ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದಲ್ಲದೆ, ಗಸ್ತನ್ನು ಸಹ ತೀವ್ರಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News