ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ: ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ

Update: 2019-04-16 18:07 GMT

ಬೆಂಗಳೂರು, ಎ.16: ಬೆಂಗಳೂರಿನ ಕೆಂಪೇಗೌಡ ರಸ್ತೆಯ ವಾಣಿಜ್ಯ ಸಂಕೀರ್ಣದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿದ್ದ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಕಾನೂನು ಪ್ರಕೋಷ್ಠದ ವಕೀಲ ವಿನೋದ್ ಕುಮಾರ್ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಂಪೇಗೌಡ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮುಹಮ್ಮದ್ ಝಬೀವುಲ್ಲಾ ಎಂಬುವವರು ಮೂರು ತಿಂಗಳ ಹಿಂದೆ ಬಾಡಿಗೆಗೆ ಪಡೆದಿದ್ದರು ಎಂದರು. ಅಲ್ಲಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದರು. ಇದೇ ಕಚೇರಿಯಲ್ಲಿ ನಕಲಿ ಮತದಾರರ ಗುರುತಿನ ತಯಾರಿಸುತ್ತಿರುವ ಬಗ್ಗೆ ಬಿಜೆಪಿ ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು. ಈ ಕಚೇರಿಯಲ್ಲಿ 10-15 ವರ್ಷಗಳಿಂದ ಮತಹಾಕದ ಮತದಾರರ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿತ್ತು ಎಂದು ಅವರು ಆರೋಪಿಸಿದರು.

ಉಪ್ಪಾರಪೇಟೆ ಪೊಲೀಸರು ಕಚೇರಿ ಮೇಲೆ ದಾಳಿ ನಡೆದ ವೇಳೆ 15 ಕಂಪ್ಯೂಟರ್‌ಗಳು, ಐದಾರು ಸ್ಕಾನರ್‌ಗಳು, ಪ್ರಿಂಟರ್‌ಗಳು ಹಾಗೂ ಆಪ್ ಯಂತ್ರಗಳು ಪತ್ತೆಯಾಗಿವೆ. ಆದರೆ, ಪೊಲೀಸರು ಯಾರನ್ನೂ ಒಳಗೆ ಬಿಡದೆ ಬಾಗಿಲು ಹಾಕಿಕೊಂಡು ಮಹಜರು ನಡೆಸಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ, ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಕ್ಷ ಅಕ್ರಮ ಮಾರ್ಗದಲ್ಲಿ ಸಾಗುತ್ತಿದ್ದು, ಈ ಪ್ರಕರಣವನ್ನು ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಇದೇ ರೀತಿ ಅಕ್ರಮ ನಡೆಸಿತ್ತು. 420, 465, 471 ಸೆಕ್ಷನ್‌ಗಳಡಿ ಪೊಲೀಸರು ಈ ಪ್ರಕರಣ ದಾಖಲಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News