ಜನವಿರೋಧಿ-ವಚನಭ್ರಷ್ಟ ಬಿಜೆಪಿ ಸೋಲಿಸುವುದು ನಮ್ಮ ಗುರಿ: ಸಿದ್ಧರಾಮಯ್ಯ
Update: 2019-04-16 18:22 GMT
ಬೆಂಗಳೂರು, ಎ. 16: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ. ಇದು ವಿರೋಧಿಗಳ ಸಂಚು. ದಯವಿಟ್ಟು ಇದಕ್ಕೆ ಕಿವಿಗೊಡಬೇಡಿ. ನಮ್ಮ ಏಕೈಕ ಗುರಿ ಜನವಿರೋಧಿ ಮತ್ತು ವಚನಭ್ರಷ್ಟ ಬಿಜೆಪಿ ಸೋಲಿಸುವುದು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
‘ಚುನಾವಣೆಯ ಕಾಲದಲ್ಲಿ ಕಿವಿಕೊಡಬೇಕಾಗಿರುವುದು ವದಂತಿಗಳಿಗಲ್ಲ, ನಮ್ಮೆದೆಯ ದನಿಗೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಮತದಾರರಲ್ಲಿ ಮನವಿ ಮಾಡಿದ್ದಾರೆ. 'ರಾಜಕೀಯ ಬೆಳವಣಿಗೆಗಳಲ್ಲಿ ವೈಯಕ್ತಿಕ ಸಂಬಂಧಗಳು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಆಗಾಗ ಏರುಪೇರುಗಳಾಗುತ್ತವೆ. ಅಂತಿಮವಾಗಿ ರಾಜಕೀಯ ಸಂಬಂಧವನ್ನು ನಿರ್ದೇಶಿಸುವುದು ಸಿದ್ಧಾಂತ. ನಾನು ಮತ್ತು ಸಚಿವ ಜಿ.ಟಿ.ದೇವೇಗೌಡ ಜಾತ್ಯತೀತ ತತ್ವಕ್ಕೆ ಬದ್ದವಾಗಿರುವವರು. ಬಿಜೆಪಿ ಸೋಲಿಗಾಗಿ ನಾವೆಲ್ಲ ಜತೆಯಲ್ಲಿ ಹೆಜ್ಜೆ ಹಾಕೋಣ ಎಂದು ಮತ್ತೊಂದು ಟ್ವಿಟ್ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.