ಉನ್ನತ ಶಿಕ್ಷಣದಲ್ಲಿ ಅವಕಾಶ ಕ್ಷೀಣ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೇಸರ

Update: 2019-04-22 15:08 GMT

ಬೆಂಗಳೂರು, ಎ.22: ದೇಶದಲ್ಲಿಂದು ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದಿಲ್ಲಿ ಹೇಳಿದರು.

ಸೋಮವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು

ಭರತವರ್ಷದಲ್ಲೇ ನಳಂದಾ ಮತ್ತು ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳು ನಮ್ಮಲ್ಲಿದ್ದವು. ಆಗಿನ ಕಾಲದಲ್ಲೇ 1,500 ಶಿಕ್ಷಕರಿದ್ದು, ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆವುಳ್ಳ ನಮ್ಮಲ್ಲಿ ಇಂದು ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ನಾವು ಮತ್ತೆ ಆ ಗತವೈಭವವನ್ನು ಮರುಸ್ಥಾಪನೆ ಮಾಡಬೇಕಿದೆ. ಡಿಜಿಟಲ್ ಕ್ರಾಂತಿಯಿಂದ ಅದು ಸಾಧ್ಯವಿದೆ ಎಂದ ಅವರು, ಆನ್‌ಲೈನ್ ಕೋರ್ಸ್‌ಗಳು, ದೂರಶಿಕ್ಷಣ ಸೇರಿದಂತೆ ಹಲವು ಡಿಜಿಟಲ್ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಎಲ್ಲದಕ್ಕೂ ಈಗ ಗೂಗಲ್ ಮೊರೆಹೋಗುವುದು ಸರ್ವೇಸಾಮಾನ್ಯವಾಗಿದೆ. ಆದರೆ, ಈ ಗೂಗಲ್ ಯಾವತ್ತೂ ‘ಗುರು’ವಿನ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದ ಅವರು, ಭಾಷೆ ಮತ್ತು ಭಾವನೆಗಳು ಯಾವಾಗಲೂ ಒಟ್ಟೊಟ್ಟಿಗೆ ಹೋಗುವಂತಹವು. ಮಾತೃಭಾಷೆಯಲ್ಲೇ ಭಾವನೆಗಳು ಪರಿಣಾಮಕಾರಿಯಾಗಿ ವ್ಯಕ್ತವಾಗುತ್ತವೆ. ಆದ್ದರಿಂದ ಶಾಲಾ ಹಂತದಿಂದ ಕಾಲೇಜುವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯಬೇಕು ಎಂದು ವೆಂಕಯ್ಯ ನಾಯ್ಡು ನುಡಿದರು.

ರಾಷ್ಟ್ರೀಯ ಜ್ಞಾನ ಆಯೋಗದ ವರದಿ ಪ್ರಕಾರ ದೇಶದಲ್ಲಿ ಪ್ರಸ್ತುತ ಉನ್ನತ ಶಿಕ್ಷಣ ಹೊಂದಿರುವವರ ಪ್ರಮಾಣ ಶೇ. 27ರಷ್ಟಿದೆ. ಆದರೆ, ಅಮೆರಿಕ ಮತ್ತು ಚೀನಾದಲ್ಲಿ ಕ್ರಮವಾಗಿ ಶೇ. 85.8 ಹಾಗೂ ಶೇ. 43.4ರಷ್ಟಿದೆ. ಇದು ನಮ್ಮ ಉನ್ನತ ಶಿಕ್ಷಣದಲ್ಲಿ ದೊರೆಯುತ್ತಿರುವ ಅವಕಾಶಗಳಿಗೆ ಕನ್ನಡಿ ಹಿಡಿಯುತ್ತದೆ.
ಹಾಗಂತ, ಬರೀ ಅಂಕಿ-ಸಂಖ್ಯೆಗಳನ್ನು ಹೆಚ್ಚಿಸಿದರೆ ಉದ್ದೇಶ ಸಾಕಾರಗೊಳ್ಳುವುದಿಲ್ಲ. ಬದಲಿಗೆ ಜಾಗತಿಕ ಮಟ್ಟಕ್ಕೆ ಸರಿಸಮಾನವಾಗಿ ಶಿಕ್ಷಣ ಗುಣಮಟ್ಟ ವೃದ್ಧಿ ಆಗಬೇಕು. ಬೆಳೆಯುತ್ತಿರುವ ಉನ್ನತ ಶಿಕ್ಷಣ ಕ್ಷೇತ್ರದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ನೀತಿಗಳು ರೂಪುಗೊಳ್ಳಬೇಕು ಎಂದು ಪ್ರತಿಪಾದಿಸಿದರು.

ಇದೇ ವೇಳೆ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್, ಸಮಾಜ ಸೇವಕ ಎಸ್.ವಿ.ವಿ.ಸುಬ್ರಹ್ಮಣ್ಯ ಗುಪ್ತ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯಪಾಲ ಮತ್ತು ಕುಲಾಧಿಪತಿ ವಜುಭಾಯಿ ವಾಲಾ, ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಸೇರಿದಂತೆ ಪ್ರಮುಖರಿದ್ದರು.

ಮಾತೃ ಭಾಷೆ ಇರಲಿ
ಅನ್ಯ ಭಾಷೆಗಳನ್ನು ಗೌರವಿಸಬೇಕು. ಅದರ ಜತೆಗೆ ಮಾತೃ ಭಾಷೆಯನ್ನು ಉಳಿಸಿ, ಬೆಳೆಸುವುದು ಕರ್ತವ್ಯ. ಮಾತೃಭಾಷೆ ಎನ್ನುವುದು ನಮ್ಮ ದೃಷ್ಟಿಯಾದರೆ, ಇತರೆ ಭಾಷೆಗಳು ಅದಕ್ಕೆ ಹಾಕಿದ ಕನ್ನಡಕ ಇದ್ದಂತೆ. ದೃಷ್ಟಿಯೇ ಇಲ್ಲದಿದ್ದರೆ, ರೇಬಾನ್ ಗ್ಲಾಸ್ ಹಾಕಿದರೂ ಏನು ಉಪಯೋಗ?
-ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News