ರೈತರಿಗೆ ಸಾಲ ಮನ್ನಾ ಬೇಡ ಎಂಬ ನಟ ದರ್ಶನ್ ಹೇಳಿಕೆ ಸರಿಯಲ್ಲ: ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಎ.29: ರೈತರ ಸಾಲ ಮನ್ನಾ ಬೇಡವೆಂದು ನಟ ದರ್ಶನ್ ನೀಡಿರುವ ಹೇಳಿಕೆ ಸರಿಯಲ್ಲವೆಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ದರ್ಶನ್, ಸರಕಾರ ಸಾಲಮನ್ನಾ ಮಾಡುವ ಬದಲು, ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ರೈತರೇ ಸಾಲ ತೀರಿಸಲು ಮುಂದಾಗುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಬ್ಯಾಂಕ್ಗಳ ಕಾಟ ತಾಳಲಾರದೆ ರೈತರು ಆತ್ಮಹತ್ಯೆಗೆ ಈಡಾಗುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ದರ್ಶನ್ ಈ ರೀತಿ ಮಾತನಾಡಬಾರದಾಗಿತ್ತು ಎಂದರು.
ಬೆಂಬಲ ಬೆಲೆ ಎಂಬುದು ಅವೈಜ್ಞಾನಿಕ ಪದ. ಈ ಆಲೋಚನೆಯೇ ತಪ್ಪು. ಯೋಗ್ಯವಾದ ಬೆಲೆ ಕೊಡಬೇಕು. ಈ ಬೆಲೆ ಕೊಟ್ಟರೆ ಸಾಲಮನ್ನಾ ಮಾಡಿ ಎಂದು ಕೇಳುವುದಿಲ್ಲ. ಬರಗಾಲ ಬಂದು, ಬೆಳೆ ನಷ್ಟದಂತಹ ಪ್ರಮಾದಗಳಿಂದಾಗಿ ರೈತರು ಮಾಡಿದ ಸಾಲ ಬೃಹದಾಕಾರವಾಗಿ ಬೆಳೆದಿದೆ. ಈ ಸಾಲದಿಂದ ಸಾವಿನ ದವಡೆಯಲ್ಲಿರುವ ರೈತ ಸಾಲದಲ್ಲೇ ಬದುಕಬೇಕಾಗಿದೆ. ಹೀಗಾಗಿ ಸಾಲವನ್ನು ತೀರಿಸಲು ಸರಕಾರಗಳು ಮುಂದಾಗಬೇಕು ಎಂದು ಅವರು ಹೇಳಿದರು.