ಹತ್ತು ಆರೋಪಿಗಳಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್

Update: 2019-05-05 16:31 GMT

ಬೆಂಗಳೂರು, ಮೇ 5: ಮೈಸೂರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಅವರ ಒಡೆತನದಲ್ಲಿದ್ದ 10 ಎಕರೆ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಆರೋಪಿಗಳಿಗೆ(ಇವರಲ್ಲಿ ಏಳು ಜನರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು) ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆ ಮತ್ತು ದಂಡವನ್ನು ಹೈಕೋರ್ಟ್ ಖಾಯಂಗೊಳಿಸಿದೆ.

ಈ ಕುರಿತಂತೆ ಶಿಕ್ಷೆಗೊಳಗಾಗಿದ್ದ ಏಳು ಜನ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

ಆರೋಪಿಗಳು: ಮುಂಬೈನ್ ಜಗದೀಪ್ ಆರ್. ತಡಾನಿ, ಸಿ.ಸುಬ್ಬರಾಯನ್, ಬಿ.ಎನ್.ರಾಜಣ್ಣ, ಎಸ್.ನರಸಿಂಹಮೂರ್ತಿ, ಅರ್.ಎಸ್.ಸೇತುರಾಮನ್, ಬಿ.ಸಿ.ಅಶ್ವತ್ಥ ಮತ್ತು ಎಂ.ಡಿ.ಭಿಮಾ ನಾಯ್ಡು. ಆರೋಪಿಗಳಲ್ಲಿ ಈಗಾಗಲೇ ಶಿವಣ್ಣ, ಕೆ.ರಾಮಣ್ಣ ಮತ್ತು ನರಸಿಂಹಮೂರ್ತಿ ಮೃತಪಟ್ಟಿದ್ದಾರೆ. ತೆರಿಗೆ ವಸೂಲಿಗಾರರಾಗಿ ಬೆಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

ಪ್ರಕರಣವೇನು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 7,51,05,327 ಮೊತ್ತದ ಆದಾಯ ತೆರಿಗೆ ಪಾವತಿಸಲು ವಿಫಲರಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಡೆಯರ್ ಅವರಿಗೆ ನೋಟಿಸ್ ನೀಡಿದ್ದರು. ನಂತರದಲ್ಲಿ ಈ ಮೊತ್ತದ ವಸೂಲಾತಿಗಾಗಿ ಮೈಸೂರಿನ ಪ್ರಾಣಿ ಸಂಗ್ರಹಾಲಯಕ್ಕೆ ಸಮೀಪದಲ್ಲಿದ್ದ ಇವರ ಜಮೀನನ್ನು ನಕಲಿ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹರಾಜು ಪ್ರಕ್ರಿಯೆಯನ್ನು 1995ರ ಅಕ್ಟೋಬರ್ 30ರಂದು ಮೈಸೂರಿನ ಕೃಷ್ಣಾ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆಸಲಾಯಿತು ಮತ್ತು ಎಕರೆಗೆ 2 ಲಕ್ಷದಂತೆ 10 ಎಕರೆಯನ್ನು ಮುಂಬೈನ್ ಜಗದೀಪ್ ಆರ್. ತಡಾನಿ ಅವರಿಗೆ ಹರಾಜಿನಲ್ಲಿ ನೀಡಲಾಗಿತ್ತು ಎಂದು ಸಿಬಿಐ ಪ್ರಕರಣ ದಾಖಲಿಸಿತ್ತು.

ಈ ಪ್ರಕ್ರಿಯೆಯಲ್ಲಿ ನಾಲ್ಕ ಜನ ಬಿಡ್ಡರ್ ಭಾಗವಹಿಸಿದ್ದರು. ತಡಾನಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್ ಕೂಗಿದ್ದರು ಎಂದು ದಾಖಲೆಗಳಲ್ಲಿ ಕಾಣಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ 2010ರ ಆ.30ರ ಎಲ್ಲ ಆರೋಪಿಗಳಿಗೆ ಆರು ತಿಂಗಳಿನಿಂದ ಮೂರು ವರ್ಷಗಳ ಅವಧಿಯವರೆಗೆ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ ಗರಿಷ್ಟ 50 ಸಾವಿರದವರೆಗೆ ದಂಡ ವಿಧಿಸಿತ್ತು. ಏಳು ಜನ ಆರೋಪಿಗಳು ಈ ಆದೇಶವನ್ನು ಪಶ್ನಿಸಿ 2010ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 

ಅಪರಾಧದಲ್ಲಿ ಎಲ್ಲರೂ ಸಮಾನ ಭಾಗಿಗಳು: ಅಧಿಕಾರಿಗಳ ಅಪರಾಧಿಕ ಸಂಚಿಗೆ ಇದೊಂದು ಸ್ಪಷ್ಟ ನಿದರ್ಶನ. ತಪ್ಪು ಮಾಡಿಲ್ಲ ಎಂಬ ಇವರ ವಾದವನ್ನು ಒಪ್ಪುವುದಕ್ಕೆ ಕಾರಣಗಳೆ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವ್ಯವಸ್ಥೆಗೆ ವಂಚನೆ ಎಸಗಿರುವ ಇವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಎಲ್ಲ ಆರೋಪಿಗಳೂ ಈ ಅಪರಾಧದಲ್ಲಿ ಸಮಾನ ಭಾಗಿಗಳಾಗಿದ್ದಾರೆ ಎಂದು ನ್ಯಾಯಮೂರ್ತಿ ಸುಧೀಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ. ಸಿಬಿಐ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News