"ರಾಜಧಾನಿಯ ಕಸದ ಸಮಸ್ಯೆಗೆ ಪಾಲಿಕೆ ಸದಸ್ಯರೇ ಹೊಣೆಗಾರರು"

Update: 2019-05-14 16:41 GMT

ಬೆಂಗಳೂರು, ಮೇ 14: ಸಮರ್ಪಕವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡದಿದ್ದರೆ ಆಯಾ ವಾರ್ಡ್ ವ್ಯಾಪ್ತಿಯ ಪಾಲಿಕೆ ಸದಸ್ಯರೆ ಹೊಣೆಗಾರರು. ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದೆಂದು ಹಸಿರು ನ್ಯಾಯಾಧೀಕರಣ ರಾಜ್ಯ ಸಮಿತಿ ಅಧ್ಯಕ್ಷ ಸುಭಾಶ್ ಆದಿ ಎಚ್ಚರಿಕೆ ನೀಡಿದರು.

ಮಂಗಳವಾರ ನಗರದ ಜಿಕೆವಿಕೆ ಆವರಣದ ನಾರ್ಥ್ ಬ್ಲಾಕ್ ಸಭಾಂಗಣದಲ್ಲಿ ಬಿಬಿಎಂಪಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಯಲಹಂಕ ವಲಯ ವತಿಯಿಂದ ಆಯೋಜಿಸಿದ್ದ ಘನ ತ್ಯಾಜ್ಯ ನಿರ್ವಹಣೆ ಪಾಲುದಾರರ ಸಭೆ ಹಾಗೂ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜಧಾನಿಯಲ್ಲಿ ಪ್ರತಿದಿನ 5,600 ಟನ್ ಕಸ ಉತ್ಪತ್ತಿಯಾಗುತ್ತದೆ. ಹೀಗಾಗಿ, ಸಮರ್ಪಕವಾಗಿ ಕಸ ವಿಂಗಡಣೆ ಹಾಗೂ ವಿಲೇವಾರಿ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಆಯಾ ವಾರ್ಡ್‌ಗಳಿಗೆ ಆಯಾ ಬಿಬಿಎಂಪಿ ಸದಸ್ಯರೇ ಮುಂದಾಳತ್ವ ವಹಿಸಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು. ಕಸ ನಿರ್ವಹಣೆ ಮಾಡದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು ಎಂದು ಹೇಳಿದರು.

ಬೆಂಗಳೂರು ಹಸಿರು ನಗರ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಘನತ್ಯಾಜ್ಯ ವಿಲೇವಾರಿಗಾಗಿ 1,500 ಕೋಟಿ ನಿಯೋಗಿಸಲಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರನ್ನು ನೇಮಿಸಿ ಘನತ್ಯಾಜ್ಯ ವಿಲೇವಾರಿ ಮಾಡಲು ನೇಮಿಸಲಾಗುತ್ತಿದೆ. ಆದರೆ, ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂದರು.

ಸಮರ್ಪಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಲು ನಾಗರಿಕರು, ಜನಪ್ರತಿನಿಧಿಗಳು, ಎನ್‌ಜಿಓಗಳು ಕೈಜೋಡಿಸಬೇಕಿದೆ. ಪ್ರತಿಯೊಬ್ಬ ನಾಗರಿಕರಲ್ಲಿ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸಿ ಹಸಿಕಸ, ಒಣಕಸ ನಿರ್ವಹಣೆ ಬಗ್ಗೆ ಸರಿಯಾದ ಮಾಹಿತಿ ತಿಳಿಸಬೇಕಿದೆ. ಇದಕ್ಕೆ ಎನ್‌ಜಿಓ, ಪೌರಕಾರ್ಮಿಕರ ಸಹಕಾರ ಪಡೆದು ಯಶಸ್ವಿಯಾಗಿ ಘನತ್ಯಾಜ್ಯ ವಿಂಗಡಣೆ ಹಾಗೂ ನಿರ್ವಹಣೆ ಮಾಡಬೇಕು. ಆಗ ಮಾತ್ರ ಪ್ರತಿ ವಾರ್ಡ್‌ಗಳನ್ನು ಕಸ ರಹಿತವನ್ನಾಗಿಸಬಹುದು ಎಂದು ತಿಳಿಸಿದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ನಗರದಲ್ಲಿ ಘನತ್ಯಾಜ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ, ಎಲ್ಲರ ಸಲಹೆ ಪಡೆದು ಘನತ್ಯಾಜ್ಯ ನಿರ್ವಹಣೆ ಮಾಡಲು ಸಭೆ ಆಯೋಜಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಒಮ್ಮತದಿಂದ ಕಾರ್ಯ ನಿರ್ವಹಿಸಿದಾಗ ಘನತ್ಯಾಜ್ಯ ನಿರ್ವಹಣೆ ಮಾಡಬಹುದು. ಕೋರ್ಟ್ ಆದೇಶದ ನಂತರ ಎಚ್ಚೆತ್ತುಕೊಂಡು ಬಿಬಿಎಂಪಿ ಸಭೆ ನಡೆಸುತ್ತಿದೆ. ಕಸವಿಲೇವಾರಿ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸದ ಹೊರತು ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ. ಯಲಹಂಕ ಕ್ಷೇತ್ರದ ಮೂರು ಕೆರೆಗಳು ನಾಶವಾಗಿವೆ. ಆದರೂ ಇದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. ಬೆಳ್ಳಳ್ಳಿ ಕೋರೆ ಅಭಿವೃದ್ಧಿಗೆ 1 ಕೋಟಿ ಅನುದಾನ ನೀಡಿದ್ದಾರೆ. ಆದರೆ, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಮರ್ಷಿಯಲ್ ಕಸ ಸಂಗ್ರಹಿಸಲಾಗುತ್ತಿದೆ. ಆದರೆ, ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಎಚ್ಚೆತ್ತುಕೊಳ್ಳಿ, ಇದರಲ್ಲಿ ನಾವೇನಾದರೂ ಮಧ್ಯ ಪ್ರವೇಶಿಸಿ ವಿರುದ್ಧ ದೂರು ದಾಖಲಿಸಿ. ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜನರು ಹಾಗೂ ಜನಪ್ರತಿನಿಧಿಗಳ ಜೊತೆ ಕೈ ಜೋಡಿಸಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಾಮಾಣಿಕವಾಗಿ ಕೈಜೋಡಿಸಬೇಕೆಂದು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತ ಅಶೋಕ್, ಸರ್ಫ್ ರಾಜ್ ಖಾನ್, ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ, ಪದ್ಮಾವತಿ, ಸತೀಶ್, ಕುಸುಮ, ಚೇತನ್, ಮಂಜುನಾಥ್ ಹಾಗೂ ವಲಯ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News