ನವ ವಿವಾಹಿತ ಆತ್ಮಹತ್ಯೆಗೆ ಶರಣು

Update: 2019-05-17 15:39 GMT

ಬೆಂಗಳೂರು, ಮೇ 17: ಪ್ರೀತಿಸಿದ ಯುವತಿಯನ್ನು ಕೇವಲ 25 ದಿನದ ಹಿಂದಷ್ಟೆ ಮದುವೆಯಾಗಿದ್ದ ನವ ವಿವಾಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹಲಸೂರು ನಿವಾಸಿಯಾಗಿದ್ದ ಆರ್.ಶಂಕರ್ ಆತ್ಮಹತ್ಯೆಗೆ ಶರಣಾಗಿರುವ ವಿವಾಹಿತ. ಈತ ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಲಕ್ಷಿತಾ ಎಂಬ ಯುವತಿಯನ್ನು 25 ದಿನಗಳ ಹಿಂದೆ ಮದುವೆಯಾಗಿದ್ದ. ಆದರೆ, ಈಕೆ ಮದುವೆಯಾದ ಹೊಸತರಲ್ಲಿಯೆ ಬೇರೆ ಮನೆ ಮಾಡಬೇಕೆಂದು ಹಠ ಹಿಡಿದಿದ್ದಾಳೆ. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆಂದು ಎನ್ನಲಾಗಿದೆ.

ನವ ವಿವಾಹಿತ ಶಂಕರ್ ಆತ್ಮಹತ್ಯೆಗೂ ಮುನ್ನ ತಾನು ಸೇವಿಸುತ್ತಿರುವ ವಿಷದ ಬಾಟಲಿಯ ಚಿತ್ರವನ್ನು ವಾಟ್ಸ್ ಆ್ಯಪ್ ಮೂಲಕ ಪತ್ನಿ ಲಕ್ಷಿತಾಗೆ ಕಳುಹಿಸಿ, ನೀನು ಬಾರದಿದ್ದರೆ ಸಾಯುವುದು ಖಚಿತವೆಂದು ಸಂದೇಶ ರವಾನಿಸಿದ್ದಾನೆ. ಇದಕ್ಕೂ ಪತ್ನಿಯಿಂದ ಯಾವುದೆ ಪ್ರತಿಕ್ರಿಯೆ ಬಾರದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಪುತ್ರನ ಸಾವಿಗೆ ಸೊಸೆಯೇ ಪ್ರೇರಣೆ ನೀಡಿದ್ದಾಳೆ ಎಂದು ಶಂಕರ್ ತಂದೆ ರಾಜನ್ ಹಲಸೂರು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೋಲೀಸರು ಆತ್ಮಹತ್ಯೆ ಪ್ರಕರಣ ಹಾಗೂ ಪತ್ನಿ ಲಕ್ಷಿತಾ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News