ಬೆಂಗಳೂರು: ಉಪಮುಖ್ಯಮಂತ್ರಿಯಿಂದ ಮಳೆಹಾನಿ ಪ್ರದೇಶಗಳ ಪರಿಶೀಲನೆ

Update: 2019-05-27 07:15 GMT

ಬೆಂಗಳೂರು, ಮೇ 27: ಮಳೆಹಾನಿ ಪ್ರದೇಶಗಳಾದ ವಿಜಯನಗರ, ಮಲ್ಲೇಶ್ವರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗೆ ನಗರಾಭಿವೃದ್ಧಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಇಂದು ಭೇಟಿ ನೀಡಿ ಮಳೆಯಿಂದ ಆಗಿರುವ ಅನಾಹುತದ ಕುರಿತು ಪರಿಶೀಲನೆ ನಡೆಸಿದರು.

ವಿಜಯನಗರಕ್ಕೆ ತೆರಳಿದ ಅವರು ರಸ್ತೆ ಬಳಿ ನೆಲಕ್ಕುರುಳಿದ ಮರಗಳನ್ನು ವೀಕ್ಷಿಸಿದರು.‌ ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆ ಆಲಿಸಿದರು.

ನೆಲಕ್ಕುರುಳುದ ರೆಂಬೆಗಳನ್ನು ಕೂಡಲೇ ತೆರವು ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಜೊತೆಗೆ ಗಾಳಿಮಳೆಯಿಂದಾಗಿ ತುಂಡಾಗಿ ಬಿದ್ದಿರುವ ವಿದ್ಯುತ್‌  ತಂತಿಗಳನ್ನು ಕೂಡಲೇ ಸರಿಪಡಿಸುವಂತೆಯೂ  ಬೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 100 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ರಾಜ್ಯದ ಕೆಲವೆಡೆ 120 ಮೀ.ಮೀ.ಗೂ ಅಧಿಕ ಮಳೆಯಾಗಿದೆ. ಬಿರುಗಾಳಿ ಇದ್ದ ಕಾರಣ ಹೆಚ್ಚು ಮರಗಳು ನೆಲಕ್ಕುರುಳಿವೆ. ಮರಗಳ ತೆರವು, ವಿದ್ಯುತ್‌ ಲೈನ್‌ ಸರಿಪಡಿಸುವುದು ಸೇರಿ ಇತರ ಮಳೆಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳ 61 ತಂಡಗಳು ಕೆಲಸ ಕಾರ್ಯನಿರ್ವಹಿಸುತ್ತಿವೆ‌ . ಜೊತೆಗೆ ಬಿಬಿಎಂಪಿ ಸಹಾಯವಾಣಿ ಸಹಿತ ಇರುವುದರಿಂದ ಸಮಸ್ಯೆಗಳು ಕೂಡಲೇ ತಿಳಿದು ಬರುತ್ತಿದೆ ಎಂದರು.

ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಅದಕ್ಕೂ ಮೊದಲೇ ಬಿಬಿಎಂಪಿ ಸಿದ್ಧವಾಗಿದೆ. ಒಂದು ತಿಂಗಳು ಪೂರ್ವಭಾವಿಯಾಗಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೆ. ಹೀಗಾಗಿ ಮಳೆಯಾದರೂ ತಗ್ಗು ಪ್ರದೇಶದಲ್ಲಿ ಪ್ರವಾಹದಂಥ ಪರಿಸ್ಥಿತಿ ಎದುರಾಗಿಲ್ಲ ಎಂದರು.

ಮರ ಬಿದ್ದಾಗ ಹೆಚ್ಚಾಗಿ ಸಮಸ್ಯೆ ಆಗುವುದು ಕೇಬಲ್‌ಗಳು ಕಡಿತವಾಗುವುದು. ಇನ್ನು ಎರಡು ತಿಂಗಳಲ್ಲಿ ಎಲ್ಲ ಕೇಬಲ್‌ಗಳ ಲೈನ್‌ಗಳನ್ನು ಭೂಗತವಾಗಿ ಹಾಕುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಬಳಿಕ ಮಲ್ಲೇಶ್ವರದ ಸಂಪಿಗೆ ರಸ್ತೆಯುದ್ದಕ್ಕೂ ನೆಲಕ್ಕುರುಳಿದ ಮರಗಳನ್ನು ಪರಿಶೀಲನೆ ನಡೆಸಿ ಸ್ಥಳೀಯ ಸಮಸ್ಯೆ ಕೂಡ ಆಲಿಸಿದರು.

ಪರಿಶೀಲನೆ ವೇಳೆ ಮೇಯರ್‌ ಗಂಗಾಬಿಕಾ, ಆಯುಕ್ತ ಮಂಜುನಾಥ್ ಪ್ರಸಾದ್, ಶಾಸಕ ಎಂ. ಕೃಷ್ಣಪ್ಪ , ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News