ರಮೇಶ್ ಜಾರಕಿಹೊಳಿ ಸಹಿತ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಪಕ್ಷ ತೊರೆಯುವುದಿಲ್ಲ: ಸಿದ್ದರಾಮಯ್ಯ

Update: 2019-05-27 08:25 GMT

ಬೆಂಗಳೂರು, ಮೇ 27: ರಮೇಶ್ ಜಾರಕಿಹೊಳಿ ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಪಕ್ಷ ತೊರೆಯುವುದಿಲ್ಲ. ಕಳೆದ ಒಂದು ವರ್ಷದಿಂದ ಸರ್ಕಾರ ಬೀಳುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಹೇಳುತ್ತಲೇ ಇದ್ದಾರೆ, ಇನ್ನೂ 4 ವರ್ಷ ಅದೇ ಮಾತು ಹೇಳುತ್ತಲೇ ಇರುತ್ತಾರೆ. ಸರ್ಕಾರ ಮಾತ್ರ ಸುಭದ್ರವಾಗಿರುತ್ತದೆ ಎಂಬ ಭರವಸೆಯಿದೆ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಜೂನ್ 1ರ ಒಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಒಂದು ವೇಳೆ ಈ ಬಾರಿಯೂ ಅವರಿಂದ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿದ್ದರೆ ಅವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದೇ ಸೂಕ್ತ ಎಂದು ಬಿ.ಎಸ್.ವೈ. ವಿರುದ್ಧ ಚಾಟಿ ಬೀಸಿದ್ದಾರೆ.

ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತ ನೀಡಿರುವುದು ಕೇಂದ್ರದಲ್ಲಿ ಅಧಿಕಾರ ನಡೆಸಲಿ ಎಂದೇ ಹೊರತು ರಾಜ್ಯದಲ್ಲಿನ ಸರ್ಕಾರ ಬೀಳಿಸಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದಲ್ಲ. ಲೋಕಸಭಾ ಫಲಿತಾಂಶ ನಮಗೆ ವಿರುದ್ಧವಾಗಿ ಬಂದ ಮಾತ್ರಕ್ಕೆ ವಿಧಾನಸಭೆಯನ್ನೂ ವಿಸರ್ಜನೆ ಮಾಡಲಿ ಎಂದು ಹೇಳುವುದು ನಾನ್ ಸೆನ್ಸ್ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News