ಲೋಕಸಭಾ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ: ಡಿ.ಕೆ.ಶಿವಕುಮಾರ್

Update: 2019-05-28 12:35 GMT

ಬೆಂಗಳೂರು, ಮೇ 28: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆ, ಆಶ್ಚರ್ಯವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರು ಸೋತಿರುವುದು ಆಘಾತ ತಂದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಆಸ್ಟ್ರೇಲಿಯಾ ಪ್ರವಾಸದಿಂದ ಮರಳಿದ ನಂತರ ಲೋಕಸಭೆ ಚುನಾವಣೆ ಫಲಿತಾಂಶ ಕುರಿತು ಮಂಗಳವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ ಎಂದರು. ಕರ್ನಾಟಕದಲ್ಲಿನ ಲೋಕಸಭಾ ಚುನಾವಣೆ ಫಲಿತಾಂಶ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಬಂದಿದೆ. ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಅವರಂತಹ ಹಿರಿಯ ನಾಯಕರ ಸೋಲು ನಿಜಕ್ಕೂ ದೊಡ್ಡ ಆಘಾತ. ಅವರ ಹೋರಾಟ ಎಂತಹದ್ದು ಎಂಬುದು ಚರಿತ್ರೆಯಲ್ಲಿ ಉಳಿದುಕೊಂಡಿದೆ ಎಂದು ಶಿವಕುಮಾರ್ ಹೇಳಿದರು.

ಸಂಸತ್‌ನಲ್ಲಿ 10 ಸಂಸದರು ಕಾಂಗ್ರೆಸ್‌ನಿಂದ ಆಯ್ಕೆಯಾಗುತ್ತಿದ್ದರು. ಈಗ ಕೇವಲ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲಿ ತಪ್ಪಾಗಿದೆ? ಏನಾಗಿದೆ? ಎಂದು ಹೇಳುವುದು ಕಷ್ಟವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನನ್ನ ಸಹೋದರ ಒಬ್ಬನೇ ಗೆದ್ದಿರೋದು ನನಗೆ ಖುಷಿಯಾಗಿಲ್ಲ. ದೇವೇಗೌಡರು, ಖರ್ಗೆಯಂತಹ ಹಿರಿಯ ನಾಯಕರು ಸಂಸತ್ತಿನಲ್ಲಿಲ್ಲದೇ ಸುರೇಶ್ ಒಬ್ಬ ಇದ್ದು ಏನು ಪ್ರಯೋಜನ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜನ ಪ್ರೀತಿ ವಿಶ್ವಾಸದಿಂದ ಮತಹಾಕಿ ಅವನನ್ನು ಉಳಿಸಿಕೊಂಡಿದ್ದಾರೆ. ಅದು ಬೇರೆ ವಿಚಾರ. ಅವನಿಗೂ 3 ಲಕ್ಷ ಅಂತರದ ಗೆಲುವು ನಿರೀಕ್ಷೆ ಮಾಡಲಾಗಿತ್ತು. ನಾನು ಕ್ಷೇತ್ರಕ್ಕೆ ಹೋಗದಿದ್ದರೂ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಕೂಡ ನಮ್ಮ ಕ್ಷೇತ್ರದಲ್ಲಿ ಸುರೇಶ್‌ಗೆ ಬೆಂಬಲಿಸಿದ್ದಾರೆ. ಆದರೆ ರಾಜ್ಯದ ಫಲಿತಾಂಶ ನಂಬಲು ಸಾಧ್ಯವಾಗುತ್ತಿಲ್ಲ. ಈ ಫಲಿತಾಂಶದ ಕುರಿತಾಗಿ ಎಲ್ಲೆಲ್ಲಿ ಏನೇನಾಗಿದೆ ಎಂಬುದನ್ನು ಇನ್ನಷ್ಟೇ ನಾವು ವಿಮರ್ಶೆ ಮಾಡಿ, ಚರ್ಚಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಮೈತ್ರಿ ವಿಚಾರವಾಗಿ ನಾನು ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ಹೀಗಾಗಿ ಗಾಂಧೀಜಿ ಹೇಳಿದಂತೆ ಕಣ್ಣಿಗೆ ಬಟ್ಟೆ ಕಟ್ಟಿ, ಕಿವಿಗೆ ಹತ್ತಿ ಇಟ್ಟು, ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಇದ್ದೀನಿ. ನಾನು ಸರಕಾರದ ಪರವಾಗಿದ್ದೇನೆ. ನಾವು ಯಾವ ಮಾತು ನೀಡಿದ್ದೇವೋ ಆ ಮಾತು ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಆಪರೇಷನ್ ಕಮಲದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಯಡಿಯೂರಪ್ಪನವರ ಕೈಯಲ್ಲಿ ಏನೇನು ಮಾಡಲು ಸಾಧ್ಯವೋ ಅವರು ಮಾಡಲಿ ನೋಡೋಣ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಲಿಂಗಾಯತ ಮತಗಳು ಬಿದ್ದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ನಾನು ಯಾವುದೇ ನಾಯಕರು, ಧರ್ಮದ ವಿಚಾರವಾಗಿ ಮಾತನಾಡುವಂತಿಲ್ಲ. ಯಾರೂ ಕೂಡ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂದು ನಮಗೆ ಆದೇಶ ಬಂದಿದೆ. ಹೀಗಾಗಿ ಈ ವಿಚಾರಗಳ ಬಗ್ಗೆ ನಾನು ಉತ್ತರಿಸುವುದಿಲ್ಲ ಎಂದರು.

ಜಿಂದಾಲ್ ಸಂಸ್ಥೆಗೆ ಭೂಮಿ ಕ್ರಯ: ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್ ಸಂಸ್ಥೆಗೆ ಮೂರೂವರೆ ಸಾವಿರ ಎಕರೆ ಜಮೀನು ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿನ್ನೆ ಕೈಗೊಂಡ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದರು.

ಜಿಂದಾಲ್ ಗೆ ಮೂರೂವರೆ ಸಾವಿರ ಎಕರೆ ಜಮೀನು ನೀಡುವ ನಿರ್ಣಯ ಸರಿಯಾಗಿದೆ. ಈ ಹಿಂದೆಯೇ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಬೇಕಿತ್ತು. ಇದರಿಂದ ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಸೃಷ್ಟಿಗೆ ಅನುಕೂಲವಾಗಲಿದೆ. ಹೀಗಾಗಿ ಇಂತಹ ನಿರ್ಣಯಗಳು ಅಗತ್ಯ ಎಂದು ಅವರು ಹೇಳಿದರು.

ಈ ಹಿಂದೆ ಇನ್ಫೋಸಿಸ್ ಕಂಪೆನಿಗೆ ಮೈಸೂರಲ್ಲಿ ಜಮೀನು ನೀಡಿದಾಗಲೂ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಇದೀಗ ಆ ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೇ ಒಮ್ಮೊಮ್ಮೆ ಒಂದೊಂದು ಇಂತಹ ನಿರ್ಣಯಗಳನ್ನು ಮಾಡಬೇಕಾಗುತ್ತೆ ಎಂದು ಶಿವಕುಮಾರ್ ಹೇಳಿದರು.

ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ, ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸಿ, ಆಶೀರ್ವಾದ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News