ಕಲ್ಲು ಎತ್ತಿಹಾಕಿ ಯುವಕನ ಕೊಲೆ

Update: 2019-05-28 12:58 GMT

ಬೆಂಗಳೂರು, ಮೇ 28: ಯುವಕನೋರ್ವನನ್ನು ಕಲ್ಲು ಎತ್ತಿಹಾಕಿ ಕೊಲೆಗೈದಿರುವ ಘಟನೆ ಇಲ್ಲಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಟೇಗಾರ ಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.

ವಿಜಯನಗರದ ಸುತ್ತ ಮುತ್ತಲ ಪ್ರದೇಶದಲ್ಲಿ ಚಿಂದಿ ಆಯುತ್ತಿದ್ದ ರಾಬಿನ್(35) ಎಂಬಾತ ಕೊಲೆಯಾದ ಯುವಕನಾಗಿದ್ದು, ಕೃತ್ಯವೆಸಗಿದ ಆರೋಪದಡಿ ತನ್ವೀರ್ ಖಾನ್‌ನನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ರಾಬಿನ್ ಹಾಗೂ ಆತನ ಪತ್ನಿ ಚಿಂದಿ ಆಯುತ್ತಿದ್ದು ಅವರೊಂದಿಗೆ ಆರೋಪಿ ತನ್ವೀರ್ ಕೂಡ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಇವರಿಗೆ ಉಳಿದು ಕೊಳ್ಳಲು ಮನೆಯಿರಲಿಲ್ಲ. ಪಟ್ಟೇಗಾರಪಾಳ್ಯದ ಶೆಡ್‌ವೊಂದರಲ್ಲಿ ಮಲಗುತ್ತಿದ್ದರು. ಕೊಲೆಯಾದ ರಾಬಿನ್ ಪತ್ನಿಗೆ ಆರೋಪಿ ತನ್ವೀರ್ ಅನೈತಿಕ ಸಂಬಂಧಕ್ಕಾಗಿ ಒತ್ತಾಯಿಸುತ್ತಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಎನ್ನುವ ಕಾರಣಕ್ಕೆ ಸೋಮವಾರ ರಾತ್ರಿ ಮದ್ಯಪಾನ ಮಾಡಿ ಮಲಗಿದ್ದ ರಾಬಿನ್ ತಲೆ ಮೇಲೆ ಕಲ್ಲು ಎತ್ತಿಹಾಕಿ ತನ್ವೀರ್ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News