ವಯನಾಡ್‌ನಲ್ಲಿ ರೈತನ ಆತ್ಮಹತ್ಯೆ : ರಾಹುಲ್ ಗಾಂಧಿ ಮನವಿಗೆ ತಕ್ಷಣ ಸ್ಪಂದಿಸಿದ ಕೇರಳ ಸಿಎಂ

Update: 2019-06-01 08:22 GMT

 ಹೊಸದಿಲ್ಲಿ, ಜೂ.1: ಕಾಂಗ್ರೆಸ್ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಮನವಿ ಪತ್ರಕ್ಕೆ ತಕ್ಷಣವೇ ಸ್ಪಂದಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯನಾಡ್ ರೈತನ ಆತ್ಮಹತ್ಯೆಗೆ ಕಾರಣವಾದ ಅಂಶದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

 ಕಾಂಗ್ರೆಸ್ ಅಧ್ಯಕ್ಷರಿಗೆ ಮೇ 31 ರಂದು ಪತ್ರ ಬರೆದಿರುವ ಕೇರಳ ಮುಖ್ಯಮಂತ್ರಿ ವಿಜಯನ್, ‘‘ರೈತ ವಿ.ಡಿ. ದಿನೇಶ್ ಕುಮಾರ್ ಆತ್ಮಹತ್ಯೆಗೆ ಕಾರಣವಾದ ಅಂಶದ ಬಗ್ಗೆ ವಿವರವಾದ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ವಯನಾಡ್‌ನ ಜಿಲ್ಲಾಧಿಕಾರಿಗೆ ನಾನು ತಿಳಿಸಿದ್ದೇನೆ. ಆರ್ಥಿಕ ನೆರವು ಸೇರಿದಂತೆ ಎಲ್ಲ ಕ್ರಮವನ್ನು ತಕ್ಷಣವೇ ಕೈಗೊಳ್ಳಲಾಗುತ್ತದೆ’’ಎಂದರು.

ವಯನಾಡ್‌ನ ನೂತನ ಸಂಸದ ರಾಹುಲ್ ತನ್ನ ಕ್ಷೇತ್ರದ ರೈತನ ಆತ್ಮಹತ್ಯೆ ಘಟನೆಯ ಬಗ್ಗೆ ತನಿಖೆ ನಡೆಸಿ, ರೈತರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಒದಗಿಸುವಂತೆ ಕೇಳಿಕೊಂಡ ಕೆಲವೇ ಗಂಟೆಗಳಲ್ಲಿ ವಿಜಯನ್ ಪ್ರತಿಕ್ರಿಯೆ ನೀಡಿದ್ದಾರೆ.

ರೈತರ ಸಾಲದ ಸಮಸ್ಯೆಯನ್ನು ಕೇಂದ್ರ ಸರಕಾರದಿಂದ ಮಾತ್ರ ಪರಿಹರಿಸಲು ಸಾಧ್ಯ. ತಾವು ಸಂಸತ್ತಿನಲ್ಲಿ ಈ ವಿಚಾರವನ್ನು ಎತ್ತಬೇಕೆಂದು ವಿಜಯನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News