ನಗರದಲ್ಲಿ 5 ವರ್ಷ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಅವಕಾಶ ನೀಡದಿರಲು ಚಿಂತನೆ; ಡಾ.ಜಿ. ಪರಮೇಶ್ವರ

Update: 2019-06-27 12:53 GMT

ಬೆಂಗಳೂರು, ಜೂ.27: ಅಪಾರ್ಟ್‌ಮೆಂಟ್‌ಗಳಲ್ಲಿ ಕುಡಿಯುವ ನೀರಿನಂಥ ಮೂಲಸೌಕರ್ಯ ಒದಗಿಸಿಕೊಡದೇ ಮಾರಾಟ ಮಾಡುತ್ತಿರುವುದರಿಂದ 5 ವರ್ಷಗಳ ಕಾಲ ಅಪಾರ್ಟ್ ಮೆಂಟ್‌‌ ನಿರ್ಮಾಣಕ್ಕೆ ಅವಕಾಶ ನೀಡದೇ ಇರಲು ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

ಸದಾಶಿವನಗರ ಗೃಹ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ ಗಳನ್ನು ನಿರ್ಮಿಸಲಾಗಿದೆ. ಆದರೆ, ಮಾರಾಟ ಮಾಡುವ ವೇಳೆ ಕುಡಿಯುವ ನೀರಿನಂಥ ಮೂಲಸೌಕರ್ಯ ಒದಗಿಸಿಕೊಡುವ ಭರವಸೆ ನೀಡುವುದಿಲ್ಲ. ನೀರಿನ ಅಭಾವದಿಂದ ಅಪಾರ್ಟ್‌ಮೆಂಟ್‌ನಲ್ಲಿರುವ ಬಹುತೇಕರು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿಕೊಂಡು, ಚರ್ಮರೋಗದಂಥ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ 5 ವರ್ಷಗಳ ಕಾಲ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಅವಕಾಶ ನೀಡದೇ ಇರಲು ಚಿಂತಿಸಲಾಗಿದೆ. ಈ ಸಂಬಂಧ ಎಲ್ಲಾ ಡೆವಲಪರ್ಸ್‌ರ ಸಭೆ ನಡೆಸಿ, ಅವರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು. ಬಳಿಕ ತೀರ್ಮಾನ ಮಾಡಲಾಗುವುದು ಎಂದರು

ಸದ್ಯ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಎಸ್‌ಟಿಪಿ ಅಳವಡಿಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಗರದಲ್ಲಿ ನೀರಿನ ಸಮಸ್ಯೆ ನೀಗಿಸಲು ಕಾವೇರಿ ಐದನೇ ಹಂತದ ಯೋಜನೆ ಪ್ರಗತಿಯಲ್ಲಿದೆ. ಆದರೆ ಇದು ಸಾಲದು. ಹೀಗಾಗಿ ಲಿಂಗನಮಕ್ಕಿ ಯಿಂದ ನೀರು ತರಲು ಡಿಪಿಆರ್‌ ಮಾಡಲು ಸೂಚಿಸಿದ್ದೇನೆ.‌ ಇದಕ್ಕೂ ವಿರೋಧ ಕೇಳಿ ಬಂದಿದೆ. ಡಿಪಿಆರ್‌ ಬಳಿಕ ಸಾಧಕ ಬಾಧಕವನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

ಸ್ಟೀಲ್‌ಬ್ರಿಡ್ಜ್‌ ಯೋಜನೆ ಈ ಹಿಂದೆಯೇ ಕೈಬಿಡಲಾಗಿದೆ. ಹೈಕೋರ್ಟ್‌ಗೂ ಈ ಸಂಬಂಧ ಮಾಹಿತಿ ನೀಡಿದ್ದೇವೆ. ಆದರೆ, ಇದೇ ಮಾರ್ಗವಾಗಿ ಎಲಿವೇಟೆಡ್‌ ಕಾರಿಡಾರ್ ಮಾಡಲು ಡಿಪಿಆರ್‌ ಸಿದ್ಧಪಡಿಸಲು ಸೂಚಿಸಿದ್ದೇವೆ. ಸ್ಟೀಲ್‌ ಬ್ರಿಡ್ಜ್‌ ಯೋಜನೆಯಲ್ಲಿ ಭ್ರಷ್ಟಾಚಾರ ಆಗಲಿದೆ ಎಂಬ ಕಾರಣಕ್ಕೆ ವಿರೋಧವಿತ್ತು. ಈ ಮಾರ್ಗಕ್ಕೆ ಪರ್ಯಾಯ ಯೋಜನೆಗೆ ವಿರೋಧವಿಲ್ಲ. ಹೀಗಾಗಿ ಎಸ್ಟೀಮ್‌ ಮಾಲ್‌ನಿಂದ ಚಾಲುಕ್ಯವರೆಗೆ ಎಲಿವೇಡೆಡ್‌ ಕಾರಿಡಾರ್‌ ನಿರ್ಮಿಸಲು ಡಿಪಿಆರ್‌ ಮಾಡಲಾಗುತ್ತಿದೆ. ಬಳಿಕ ಜನಾಭಿಪ್ರಾಯದ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್ ಫೆಡರೇಷನ್ ಪದಾಧಿಕಾರಿಗಳು ವಿದ್ಯಾರ್ಥಿಗಳ ಬಸ್‌ಪಾಸ್ ವೆಚ್ಚದ ಬಾಬ್ತು ಭರಿಸುವುದು, ನಾಲ್ಕು ನಿಗಮದ ಬದಲು ಒಂದೇ ನಿಗಮ ಮಾಡುವುದು ಸೇರಿದಂತೆ ಅನೇಕ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆ ಚರ್ಚಿಸಲಾಗುವುದು. ಅಲ್ಲದೆ, ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ಮಾಡಲಾಗುವುದು.
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News