ಮದ್ಯದ ಅಮಲಿನಲ್ಲಿ ಜಗಳ ಕೊಲೆಯಲ್ಲಿ ಅಂತ್ಯ

Update: 2019-07-01 14:12 GMT

ಬೆಂಗಳೂರು, ಜು.1: ಮದ್ಯದ ಅಮಲಿನಲ್ಲಿ ನಡೆದ ಜಗಳ, ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಆರ್‌ಆರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ತಮಿಳುನಾಡಿನ ವೇಲೂರು ನಿವಾಸಿ ಜ್ಞಾನಸಾಗರ(35) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಆರ್‌ಆರ್ ನಗರದ 15ನೇ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಜ್ಞಾನಸಾಗರ ಗಾರೆ ಕೆಲಸ ಮಾಡಿಕೊಂಡು ಅದೇ ಕಟ್ಟಡದೊಳಗೆ ವಾಸವಾಗಿದ್ದ. ಈತನ ಜೊತೆಯಲ್ಲಿಯೇ ರಂಜೀತ್ ಎಂಬಾತ ವಾಸವಾಗಿದ್ದ ಎನ್ನಲಾಗಿದೆ. ಇವರಿಬ್ಬರು ರವಿವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಮದ್ಯ ಸೇವಿಸಿ ಮಾತನಾಡುತ್ತಾ ಹೋಗುತ್ತಿದ್ದ ವೇಳೆ ಅಮಲಿನಲ್ಲಿ ಜಗಳ ನಡೆದು, ರಂಜೀತ್ ಗಂಭೀರ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ರಂಜೀತ್ ನನ್ನು ವಶಕ್ಕೆ ಪಡೆದು ಆರ್‌ಆರ್‌ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News