ವಿವಿಧ ಅಪರಾಧ ಪ್ರಕರಣ: 10 ಮಂದಿಯ ಬಂಧನ, 1.68 ಕೋಟಿ ರೂ. ಮೌಲ್ಯದ ಮಾಲು ಜಪ್ತಿ

Update: 2019-07-03 13:45 GMT

ಬೆಂಗಳೂರು, ಜು.3: ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ 10 ಜನರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು,  1.68 ಕೋಟಿ ರೂ. ಮೌಲ್ಯದ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್, ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 15 ಕಾರುಗಳು, 49 ಬೈಕ್ ಜಪ್ತಿ ಮಾಡಿ, 59 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.

ಕಾರು ಕಳವು ಮಾಡಿ ಮೋಜು ಮಾಡುತ್ತಿದ್ದ ತಮಿಳುನಾಡಿನ ವೆಲ್ಲೂರಿನ ಬಾಬು ಹಾಗೂ ಚೆನ್ನೈನ ಸದ್ದಾಂ ಹುಸೇನ್ ಬಂಧಿಸಿ, ಒಂದು ಕೋಟಿ ರೂ. ಮೌಲ್ಯದ 15 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಚೆನ್ನೈ ಸೇರಿದಂತೆ ಹಲವು ಕಡೆ ಒಟ್ಟು 15 ಕಾರುಗಳನ್ನು ಕಳವು ಮಾಡಿದ್ದಾರೆ. ಅದೇ ರೀತಿ, ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು, ತಮಿಳುನಾಡಿನ ತಿರಪ್ಪತ್ತೂರಿನ ಶಬರಿ(38), ಜೋಲಾರ್ ಪೇಟೆಯ ಬಾಲಾಜಿ(49), ಸುಭಾಷ್(20) ಸೇರಿ ಮೂವರನ್ನು ಬಂಧಿಸಿ ಕಳವು ಮಾಡಿದ್ದ 28 ಲಕ್ಷ ರೂ. ಮೌಲ್ಯದ 800 ಗ್ರಾಂ. ಚಿನ್ನಾಭರಣ, 2.5 ಲಕ್ಷ ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಬಂಧನದಿಂದ ಹುಳಿಮಾವು 2, ಎಲೆಕ್ಟ್ರಾನಿಕ್ ಸಿಟಿಯ 8 ಸೇರಿದಂತೆ, 10 ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.

ಮಡಿವಾಳ ಠಾಣಾ ಪೊಲೀಸರು, ಕೇರಳ ಮೂಲದ ಜೋಸಿನ್ ಟಿಟೋಸ್ (20), ಸಿಮ್‌ಜಿತ್ ಶಶಿಕುಮಾರ್ (22)ನನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವರ ಬಂಧನದಿಂದ ಮಡಿವಾಳದ 2, ಬಾಣಸವಾಡಿ, ಇಂದಿರಾನಗರ, ಮಾರತ್ ಹಳ್ಳಿ, ಆವಲಹಳ್ಳಿ, ಸುದ್ದಗುಂಟೆಪಾಳ್ಯದಲ್ಲಿ ತಲಾ 1 ಸೇರಿದಂತೆ, 10 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದರು.

ಇನ್ನೊಂದು ಪ್ರಕಣದಲ್ಲಿ ತಿರುವಣ್ಣಾಮಲೈ ಸೆಲ್ವರಾಜ್(30) ಎಂಬಾತನನ್ನು ಬಂಧಿಸಿ, 3 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಆಡುಗೋಡಿ ಠಾಣಾ ಪೊಲೀಸರು, ಬೈಕ್ ಕಳವು ಮಾಡುತ್ತಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆದುಕೊಂಡು, 13 ಲಕ್ಷ ರೂ. ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈತನಿಂದ ಹೊಸಕೋಟೆಯ 3, ಮಾಲೂರಿನ 2, ಆಡುಗೋಡಿಯ 1 ಸೇರಿದಂತೆ, 18 ದ್ವಿಚಕ್ರ ವಾಹನಗಳ ಕಳುವಿನ ಪ್ರಕರಣದಲ್ಲಿ 5 ವಾಹನಗಳ ವಾರಸುದಾರರು ಪತ್ತೆಯಾಗಬೇಕಾಗಿದೆ ಎಂದು ವಿವರಿಸಿದರು.

ಅದೇ ರೀತಿ, ಪರಪ್ಪನ ಅಗ್ರಹಾರ ಠಾಣಾ ಪೊಲೀಸರು, ಜೆಪಿನಗರದ ದೀಪಕ್(18), ತಮಿಳುನಾಡಿನ ವಾಣಿಯಂಬಾಡಿಯ ಸುಹೇಲ್(23)ನನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಡಿಸಿಪಿ ಇಷಾಪಂತ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News