ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Update: 2019-07-08 16:14 GMT

ಬೆಂಗಳೂರು, ಜು.8: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚೌಡಪ್ಪ ಕಾಲನಿಯ ವಂಸಂತ್‌ ಕುಮಾರ್(34) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದ್ದು, ಕಮಲ್ ಎಂಬಾತ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ.

ಆಟೊ ಚಾಲಕನಾಗಿದ್ದ ವಂಸತ್ ಮತ್ತು ನೆರೆಮನೆಯ ಕಮಲ್ ಇಬ್ಬರು ಸ್ನೇಹಿತರು. ರವಿವಾರ ರಾತ್ರಿ ಇಬ್ಬರೂ ಮಧ್ಯ ಸೇವಿಸಿ, ಹೊಸಹಳ್ಳಿ ಮುಖ್ಯರಸ್ತೆ, ಪಾದರಾಯನಪುರ, ಚೌಡಪ್ಪ ಕಾಂಪೌಂಡ್ ಬಳಿ ಇಬ್ಬರು ಜಗಳವಾಡಿ, ಜಗಳ ವಿಕೋಪಕ್ಕೆ ತಿರುಗಿದಾಗ ಕಮಲ್ ಚಾಕುವಿನಿಂದ ವಸಂತ್‌ಗೆ ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ.

ಗಂಭಿರವಾಗಿ ಗಾಯಗೊಂಡಿರುವ ವಸಂತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದಾರೆ. ವಿಷಯ ತಿಳಿದು ಜೆಜೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿ ಕಮಲ್‌ನನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News