ವಿಶ್ವಾಸ ಮತ ಯಾಚನೆ ಗೆಲ್ಲುತ್ತೇವೆ: ಸಚಿವ ಡಿ.ಕೆ.ಶಿವಕುಮಾರ್
Update: 2019-07-15 14:26 GMT
ಬೆಂಗಳೂರು, ಜು. 15: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗುರುವಾರ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಇದರಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸ್ಪೀಕರ್ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಗುರುವಾರ ವಿಶ್ವಾಸಮತ ಯಾಚನೆಗೆ ಒಪ್ಪಿಗೆ ಕೊಟ್ಟಿದ್ದಾರೆ. ನಾವು ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಪಡೆಯುತ್ತೇವೆ ಎಂದರು.
ನಮ್ಮ ಪಕ್ಷದ ಯಾವುದೇ ಶಾಸಕರೂ ಸದನಕ್ಕೆ ಗೈರು ಹಾಜರಾಗುವುದಿಲ್ಲ. ಅಲ್ಲದೆ, ಯಾವ ಶಾಸಕ ಪಕ್ಷದ ವಿಪ್ ಉಲ್ಲಂಘನೆ ಮಾಡುವುದಿಲ್ಲ. ಎಲ್ಲರೂ ಸದನದ ಕಲಾಪಕ್ಕೆ ಹಾಜರಾಗಲಿದ್ದಾರೆ. ಮುಂಬೈನಲ್ಲಿರುವ ಎಲ್ಲ ಶಾಸಕರು ಕಲಾಪಕ್ಕೆ ಬರಲಿದ್ದಾರೆಂದು ಅವರು ತಿಳಿಸಿದರು.