ನಿಷೇಧಿತ ಪ್ಲಾಸ್ಟಿಕ್ ತಯಾರಿಸುವ 37 ಕಾರ್ಖಾನೆಗಳನ್ನು ಮುಚ್ಚಲು ಕೆಎಸ್‌ಪಿಸಿಬಿ ಆದೇಶ

Update: 2019-07-20 16:14 GMT

ಬೆಂಗಳೂರು, ಜು.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸುತ್ತಿರುವ 37 ಕಾರ್ಖಾನೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.

ನಿಷೇಧಿತ ಪ್ಲಾಸ್ಟಿಕ್ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪರಿಶೀಲಿಸಿ, ಕ್ರಮ ಕೈಗೊಳ್ಳಲಿದ್ದಾರೆ. ಪ್ಲಾಸ್ಟಿಕ್ ಕೈಚೀಲ ಸೇರಿದಂತೆ ಇನ್ನಿತರೆ ವಸ್ತುಗಳನ್ನು ನಿಷೇಧಿಸಿ ಎರಡೂವರೆ ವರ್ಷ ಕಳೆದರೂ, ನಗರದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಜು.15ರಿಂದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಪ್ಲಾಸ್ಟಿಕ್ ಕೈಚೀಲ ಬಳಸುತ್ತಿರುವ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆಸಿ, ದಂಡ ಹಾಕಲಾಗುತ್ತಿದೆ.

ಕಳೆದ ಈದು ದಿನಗಳಲ್ಲಿ 9,380 ಕೆ.ಜಿಯಷ್ಟು ತೂಕದ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿ, 19.14 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇದೀಗ ಪ್ಲಾಸ್ಟಿಕ್ ವಸ್ತುಗಳ ತಯಾರಕರು, ಮಾರಾಟಗಾರರು ಮತ್ತು ಅಂಗಡಿಗಳಿಗೆ ಪೂರೈಸುತ್ತಿರುವವರನ್ನು ಪತ್ತೆ ಮಾಡಿ, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಸುತ್ತಿದ್ದ ಕೈಗಾರಿಕೆಗಳನ್ನು ಮುಚ್ಚಲು ಆದೇಶಿಸಿದೆ. ಆ ಕಂಪೆನಿಗಳ ಪಟ್ಟಿಯನ್ನು ಪಾಲಿಕೆಗೆ ನೀಡಿದ್ದು, ಪರಿಶೀಲಿಸಲು ಸೂಚಿಸಿದೆ.

ಮುಚ್ಚಲು ಆದೇಶಿಸಿರುವ ಕಾರ್ಖಾನೆಗಳು: ಸುಂಕದಕಟ್ಟೆಯ ಪ್ರೆಸ್ಟೀಜ್ ಪಾಲಿ ಪ್ಯಾಕ್, ಶ್ರೀಗಂಧ ಕಾವಲಿನ ಭವ್ಯಶ್ರೀ ಪ್ಲಾಸ್ಟಿಕ್ಸ್, ಪೀಣ್ಯ 2ನೇ ಹಂತದಲ್ಲಿನ ದೀಪು ಪ್ಯಾಕ್ ಲೈನ್ಸ್, ಶಿವಸಾಯಿ ಪ್ಯಾಕೇಜಿಂಗ್, ಅನ್ನಪೂರ್ಣೇಶ್ವರಿ ಪಾಲಿಪ್ಯಾಕ್, ಜಯದುರ್ಗ, ಮಾಗಡಿ ಮುಖ್ಯರಸ್ತೆಯ ಲಕ್ಷ್ಮಿ ಪಾಲಿಮರ್ಸ್, ಎಸ್‌ಪಿ ಪಾಲಿಮರ್ಸ್, ಪ್ಲಾಸ್ಟ್ ಇಂಡಿಯಾ, ಭೈರವೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್‌ನ ರಾಜ್ ಪುನೀತ್ ಪಾಲಿ ಪ್ಯಾಕ್, ಮಹಾಲಕ್ಷ್ಮೀ ಪ್ಲಾಸ್ಟಿಕ್, ಹೆಗ್ಗನಹಳ್ಳಿಯ ದಿವ್ಯ ಪಾಲಿ ಪ್ಯಾಕ್, ಸನ್‌ರೈಸ್ ಪ್ರಾಡಕ್ಟ್, ಮಾಗಡಿ ರಸ್ತೆಯಲ್ಲಿನ ಡೈಮಂಡ್ ಪಾಲಿ ಪ್ಯಾಕ್, ಸಾಣೆಗುರುವನಹಳ್ಳಿಯ ಎ.ಕೆ.ಪಾಲಿಪ್ಯಾಕ್, ಕಾಡುಗೊಂಡನಹಳ್ಳಿಯ ಬಿ.ಆರ್.ಪ್ಲಾಸ್ಟಿಕ್ಸ್, ಜೆಪಿಎಸ್ ಪ್ಯಾಕೇಜಿಂಗ್, ಮಾಚೋಹಳ್ಳಿಯ ರಾಜಾರಾಂ ಇಂಡಸ್ಟ್ರೀಸ್, ಕುಂಬಳಗೋಡು ಬಳಿಯ ಕ್ರಿಸ್ಟಲ್ ಪಾಲಿಮರ್ಸ್.

ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶದಲ್ಲಿನ ಚಂದು ಪ್ಯಾಲಿಪ್ಯಾಕ್, ಸಂಗಂ ಪ್ಯಾಲಿಪ್ಯಾಕ್, ಚಿನ್ನಗಿರಿಯಪ್ಪ ಕೈಗಾರಿಕಾ ಪ್ರದೇಶದಲ್ಲಿನ ಮಾಸ್ಕೆಟ್ ಪಾಲಿ ಪ್ಯಾಕ್, ಮಾಚೋಹಳ್ಳಿ ಗೇಟ್‌ನಲ್ಲಿನ ಮೆಟ್ರೊ ಪಾಲಿಮರ್ಸ್, ಮೈಸೂರು ರಸ್ತೆಯ ಯೂನಿಕ್ ಪ್ಲಾಸ್ಟ್, ಮಾಡ್ರನ್ ಕಾರ್ಪೋರೇಷನ್, ನಾಯಂಡಹಳ್ಳಿಯ ಅಫ್ರಿನ್ ಇಂಡಸ್ಟ್ರೀಸ್, ಬಾಲಾಜಿನಗರದ ಎಸ್.ಎಸ್.ಪಾಲಿಮರ್ಸ್, ಪೀಣ್ಯ 2ನೇ ಹಂತದಲ್ಲಿನ ಶಿವ ಥೆರ್ಮೋಪ್ಯಾಕ್, ಹೆಗ್ಗನಹಳ್ಳಿಯಲ್ಲಿನ ಶ್ರೀ ಪಾಲಿಮರ್, ಪೀಣ್ಯ 2ನೇ ಹಂತದ ಆಂಧ್ರಹಳ್ಳಿ ಮುಖ್ಯರಸ್ತೆಯಲ್ಲಿನ ಗುರುದೇವ್ ಫ್ಲೆಕ್ಸ್, ದೀಪಕ್ ಪಾಲಿಫ್ಲೆಕ್ಸ್, ಪವಿತ್ರ ಪಾಲಿಮರ್ಸ್, ಕಾಮಾಕ್ಷಿಪಾಳ್ಯದ ಆರ್.ಸಿ.ಪಾಲಿಮರ್ಸ್, ಸಾಯಿ ಪಾಲಿಮರ್ಸ್, ಸೋನಿಯಾ ಪಾಲಿಪ್ಯಾಕ್, ತಿಗಳರಪಾಳ್ಯದ ವೆಂಕಟೇಶ್ವರ ಪಾಲಿಪ್ಯಾಕ್, ಮಹದೇವ್ ಪ್ಲಾಸ್ಟಿಕ್ ಇಂಡಸ್ಟ್ರಿ.

ಒಂದೊಮ್ಮೆ ನಿಯಮಬಾಹಿರವಾಗಿ ನಿಷೇಧಿತ ಪ್ಲಾಸ್ಟಿಕ್ ಕೈಚೀಲ ಮತ್ತು ಇನ್ನಿತರೆ ವಸ್ತುಗಳನ್ನು ತಯಾರಿಸುತ್ತಿರುವುದು ಕಂಡುಬಂದರೆ, ಯಂತ್ರೋಪಕರಣಗಳನ್ನು ಜಪ್ತಿ ಮಾಡಿ, ದುಪ್ಪಟ್ಟು ದಂಡ ಹಾಕಲಾಗುವುದು. ಸಂಬಂಧಪಟ್ಟ ಮಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

-ಡಿ.ರಣ್‌ದೀಪ್, ಬಿಬಿಎಂಪಿ ಹೆಚ್ಚುವರಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News