ಅಯೋಧ್ಯೆ ಸಂಧಾನ ಸಮಿತಿಯಿಂದ ಮೌಲಾನಾ ವಲಿ ರಹಮಾನಿ ಭೇಟಿ
ಲಕ್ನೋ,ಜು.21: ರಾಜಕೀಯವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ರಾಜಿ ಪರಿಹಾರವನ್ನು ಕಂಡುಕೊಳ್ಳಲು ರಚಿಸಲಾಗಿರುವ ಸಂಧಾನ ಸಮಿತಿಯು ಶನಿವಾರ ಇಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ)ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರಹಮಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಫ್.ಎಂ.ಐ.ಕಲೀಫುಲ್ಲಾ ಅವರು ಸಮಿತಿಯ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ ಪಂಚು ಅವರೊಂದಿಗೆ ಇಲ್ಲಿಯ ವಿವಿಐಪಿ ಗೆಸ್ಟ್ಹೌಸ್ನಲ್ಲಿ ತನ್ನನ್ನು ಭೇಟಿಯಾಗಿದ್ದರು ಎಂದು ರಹಮಾನಿ ರವಿವಾರ ಸುದ್ದಿಗಾರರಿಗೆ ತಿಳಿಸಿದರು. ತಂಡದ ಇನ್ನೋರ್ವ ಸದಸ್ಯರಾದ ಶ್ರೀ ಶ್ರೀ ರವಿಶಂಕರ್ ಅವರು ಈ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿರಲಿಲ್ಲ.
‘ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಸಮಿತಿಗೆ ನೆರವಾಗಲು ಎಐಎಂಪಿಎಲ್ಬಿ ಸಿದ್ಧವಿದೆ. ನಮಗೆ ಬೇರೆ ಯಾವುದೇ ಆಯ್ಕೆಯಿಲ್ಲ. ಮಂಡಳಿಯು ಸರ್ವೋಚ್ಚ ನ್ಯಾಯಾಲಯದ ನಿರ್ಧಾರಕ್ಕೆ ಬದ್ಧವಾಗಿರುತ್ತದೆ ’ ಎಂದು ರೆಹಮಾನಿ ಹೇಳಿದರು.