ಪ್ರತ್ಯೇಕ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

Update: 2019-07-22 18:39 GMT

ಬೆಂಗಳೂರು, ಜು.22: ವೇಗವಾಗಿ ಬೈಕ್‌ನಲ್ಲಿ ಸಾಗುತ್ತಿದ್ದ ಯುವಕನೋರ್ವ ನಿಯಂತ್ರಣ ತಪ್ಪಿ, ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಕೆಆರ್‌ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಮೂಲದ ಸತೀಶ್‌ ಕುಮಾರ್(25) ಮೃತಪಟ್ಟಿರುವ ಯುವಕ ಎಂದು ತಿಳಿದುಬಂದಿದೆ.

ಕೆಆರ್ ಪುರಂನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ ರವಿವಾರ ರಾತ್ರಿ ಇಲ್ಲಿನ ರಾಮಮೂರ್ತಿನಗರದ ಕಡೆಯಿಂದ ವೇಗವಾಗಿ ಬೈಕ್‌ನಲ್ಲಿ ಬಂದು ಬಿಎಸ್‌ಎನ್‌ಎಲ್ ಕಚೇರಿ ಬಳಿ ನಿಯಂತ್ರಣ ತಪ್ಪಿ, ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಕೆಆರ್ ಪುರಂ ಸಂಚಾರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಮಾಲಕ ಸಾವು: ಹಿಂದಿನಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಟೈರ್ ಅಂಗಡಿ ಮಾಲಕ ಅಂಕುಶ್ (32) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅತ್ತಿಕುಪ್ಪೆಯಲ್ಲಿ ಟೈರ್ ಅಂಗಡಿ ನಡೆಸುತ್ತಿದ್ದ ಅಂಕುಶ್, ರವಿವಾರ ರಾತ್ರಿ 9ರ ವೇಳೆ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ನಾಗರಬಾವಿ ವೃತ್ತದ ಮದ್ದೂರಮ್ಮ ದೇವಾಲಯದ ಮುಂಭಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News