ಅಮಿತ್ ಶಾ ಸೂಚನೆಗೆ ಕಾಯುತ್ತಿದ್ದೇವೆ: ಮಾಧುಸ್ವಾಮಿ
ಬೆಂಗಳೂರು, ಜು.24: ಪಕ್ಷದ ಶಾಸಕಾಂಗ ಸಭೆಗೆ ಅಮಿತ್ ಶಾ ಅನುಮತಿ ಕೊಡಬೇಕು. ಶಾ ಸೂಚನೆಗೆ ಕಾಯುತ್ತಿದ್ದೇವೆ. ಸೂಚನೆ ಬಂದ ಬಳಿಕ ರಾಜ್ಯಪಾಲರ ಭೇಟಿ ಮಾಡುತ್ತೇವೆ. ಕೇಂದ್ರ ವೀಕ್ಷಕರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರ ಸಮಕ್ಷಮದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡುತ್ತೇವೆ ಎಂದು ಶಾಸಕ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಎಲ್ಲ ವಿದ್ಯಮಾನಗಳನ್ನು ಕೇಂದ್ರಕ್ಕೆ ತಲುಪಿಸಿದ್ದೇವೆ. ಕೇಂದ್ರ ನಾಯಕರ ಸಲಹೆಯಂತೆ ಮುಂದುವರಿಯುತ್ತೇವೆ. ಮುಂದಿನ ನಡೆಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ.
‘‘ಜನರ ಶಾಪದಂತೆ ಈ ಸರಕಾರಕ್ಕೆ ಮುಕ್ತಿ ಸಿಕ್ಕಿದೆ. ಬಹುಮತ ಇಲ್ಲದೇ ಕುಮಾರಸ್ವಾಮಿ ನೇತೃತ್ವದ ಸರಕಾರ ಪತನವಾಗಿದೆ. ಕುಮಾರಸ್ವಾಮಿ ಬಹುಮತಕ್ಕೆ ಮುಂದಾಗಬಾರದಿತ್ತು. ಅಲ್ಪ ಸ್ವಲ್ಪ ಗೌರವ ಉಳಿಯುತ್ತಿತ್ತು’’ಎಂದು ಶಾಸಕ ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜಕಾರಣ ನಂಬರ್ ಗೇಮ್ ಮೇಲೆ ನಡೆಯುತ್ತದೆ. ಸ್ಪಷ್ಟ ಬಹುಮತ ಸಿಕ್ಕಿದ್ದರೆ ಇಂತಹ ಪ್ರಹಸನ ನಡೆಯುತ್ತಿರಲಿಲ್ಲ. ಬಹುಮತವಿದ್ದರೆ ನಾನು ಎಂಬುದು ಬರುತ್ತದೆ. ಕಳೆದುಕೊಂಡವರಿಗೆ ನೋವಿರುತ್ತದೆ. ಗಳಿಸಿಕೊಂಡವರಿಗೆ ಖುಷಿ ಇರುತ್ತದೆ. ಬಿಜೆಪಿ ಬರಬೇಕೆಂದು ಜನ ಹೆಚ್ಚು ಸ್ಥಾನ ನೀಡಿದ್ದರು. ಕೆಲವು ಸ್ಥಾನ ಮಿಸ್ ಆಗಿತ್ತು. ಹೀಗೆ-ಹಾಗೆ ಆಗುತ್ತಿರುತ್ತದೆ ಎಂದು ಬಿಜೆಪಿ ಬೆಂಬಲಿಗ, ನಟ ಜಗ್ಗೇಶ್ ಹೇಳಿದ್ದಾರೆ.