ಅಂಗವೈಕಲ್ಯ ಮರೆಸಿದ ಬುದ್ಧಿವಂತಿಕೆ: 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಜನಮನ ಗೆದ್ದ ದುರ್ಗದ ಹುಲಿ

Update: 2019-07-24 11:20 GMT

ಬೆಂಗಳೂರು: ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಬೇಕು- ಈ ರೀತಿಯ ಘೋಷವಾಕ್ಯಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಈ ಮಾತನ್ನು ನಿಜ ಮಾಡುವಂಥ ಪ್ರಸಂಗವೊಂದು 'ಕಲರ್ಸ್ ಕನ್ನಡ'ದಲ್ಲಿ ಪ್ರಸಾರವಾಗುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಡೆಸಿಕೊಡುವ "ಕನ್ನಡದ ಕೋಟ್ಯಧಿಪತಿ" ಕಾರ್ಯಕ್ರಮದಲ್ಲಿ ನಡೆದಿದೆ.

ತನ್ನೆರಡೂ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಬೆಳಗೂರಿನ ರಂಗನಾಥ್ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹಣ ಗೆದ್ದರು ಮಾತ್ರವಲ್ಲದೆ ಪುನೀತ್ ರಾಜ್‍ಕುಮಾರ್ ಸೇರಿದಂತೆ ಜನಮನವನ್ನೂ ಗೆದ್ದರು. ಸಂಕಷ್ಟದ ಮಧ್ಯೆಯೂ ಅತೀವವಾದ ಆತ್ಮವಿಶ್ವಾಸ ತೋರುವ ರಂಗನಾಥ್ ತಮ್ಮ ಜ್ಞಾನದಿಂದಲೇ "ಕನ್ನಡದ ಕೋಟ್ಯಧಿಪತಿ" ಕಾರ್ಯಕ್ರಮದಲ್ಲಿ ಯಶಸ್ಸು ಸಾಧಿಸಿದ್ದಾರೆ.

ರಂಗನಾಥ್ ತಮ್ಮ ಐದನೇ ವಯಸ್ಸಿಗೇ ಕಾಲಿನ ಶಕ್ತಿಯನ್ನು ಕಳೆದುಕೊಂಡರು. ಅದೂ ವೈದ್ಯರ ನಿರ್ಲಕ್ಷ್ಯದಿಂದಾಗಿ. ಕುಟುಂಬದ ಬಡತನ ಅವರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ನೀಡದಿರಲು ಕಾರಣವಾಯಿತು. ತೆವಲಿಕೊಂಡೇ ಶಾಲೆಗೆ ಹೋಗಲು ಶುರು ಮಾಡಿದ ರಂಗನಾಥ್ ಅವರ ಕುಟುಂಬದಲ್ಲೇ ಹತ್ತನೇ ತರಗತಿ ಪಾಸ್ ಮಾಡಿದ ಮೊದಲಿಗರಾದರು. ನಂತರ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದರು ಮಾತ್ರವಲ್ಲದೆ ಬೆಳಗೂರಿಗೇ ಮೊದಲಿಗರಾದರು. ಆನಂತರ ಟಿಸಿಎಚ್ ತರಬೇತಿ ಪಡೆದು ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಲು ಶುರು ಮಾಡಿದರು. ಇಂದು ಬೆಳಗೂರಿನಲ್ಲಿ "ಟ್ಯೂಷನ್ ರಂಗನಾಥ್" ಎಂದೇ ಅವರು ಚಿರಪರಿಚಿತರು.

"ನಿಮ್ಮ ಸಾಧನೆ ಎಲ್ಲ ಅಂಗವಿಕಲರಿಗೆ ಮಾದರಿ ಮತ್ತು ಸ್ಪೂರ್ತಿ" ಎಂದು ಪುನೀತ್ ಅವರು ಹೇಳಿದರು.

ರಂಗನಾಥ್ ಅವರಿಗೆ ಕಾಲಿನ ಸಮಸ್ಯೆಯಿಂದಾಗಿ ಅಲ್ಲಿಲ್ಲಿ ಓಡಾಡುವುದು ದೊಡ್ಡ ಸಮಸ್ಯೆ. ಹಾಗೆಂದು ಯಾರಾದರೂ ಅನುಕಂಪ ತೋರಿಸುವುದು ಅವರಿಗಾಗಲ್ಲ. ಅದಕ್ಕಾಗಿ ಒಂದು ಪವರ್ ವ್ಹೀಲ್‍ಚೇರ್ ಖರೀದಿಸಬೇಕು ಎಂಬುದು ಅವರ ಕನಸು. "ಕನ್ನಡದ ಕೋಟ್ಯಧಿಪತಿ"ಯಲ್ಲಿ ಗೆಲ್ಲುವ ಹಣದಿಂದ ಅದನ್ನು ಖರೀದಿಸುವುದು ಅವರ ಉದ್ದೇಶ. ರಂಗನಾಥ್ ಅವರ ಕನಸಿಗೆ ಬಲ ನೀಡಬಲ್ಲ ಪವರ್ ವ್ಹೀಲ್‍ಚೇರ್ ಖರೀದಿಸಲು ಅವರಿಗೆ ಸಾಧ್ಯವಾಯಿತೇ ಎಂಬುದನ್ನು ಇದೇ ಶನಿವಾರ ಪ್ರಸಾರವಾಗುವ "ಕನ್ನಡದ ಕೋಟ್ಯಧಿಪತಿ" ಕಾರ್ಯಕ್ರಮದಲ್ಲಿ ನೋಡಬಹುದು.

ಅಸಂಖ್ಯಾತ ಕನಸುಗಳನ್ನು ಹೊತ್ತು ತರುವ ಜನಸಾಮಾನ್ಯರ ಕನಸುಗಳನ್ನು ನನಸು ಮಾಡಲು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಸಾಧ್ಯವಾಗುತ್ತಿದೆ. ಅವರಲ್ಲಿರುವುದು ಆತ್ಮವಿಶ್ವಾಸ ಮತ್ತು ಜ್ಞಾನ ಮಾತ್ರ. ಆ ರೀತಿಯ ವ್ಯಕ್ತಿಗಳಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ರಂಗನಾಥ್. ರಂಗನಾಥ್ ಅವರಂಥ ಸಾಮಾನ್ಯ ಮನುಷ್ಯರ ಜೊತೆಗೆ ನಿಲ್ಲಲು ಕಲರ್ಸ್ ಕನ್ನಡಕ್ಕೆ ಹೆಮ್ಮೆಯಾಗುತ್ತಿದೆ," ಎಂದು ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್ ಬ್ಯುಸಿನೆಸ್ ಹೆಡ್ ಮತ್ತು "ಕನ್ನಡದ ಕೋಟ್ಯಧಿಪತಿ"  ನಿರ್ದೇಶಕರಾದ ಪರಮೇಶ್ವರ ಗುಂಡ್ಕಲ್ ಹೇಳುತ್ತಾರೆ.

ರಂಗನಾಥ್ ಅವರ ಸೂಪರ್ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ಜು. 27ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News