ವಿದ್ಯುತ್ ತಂತಿ ತಗುಲಿ ವ್ಯಕ್ತಿ ಮೃತ್ಯು

Update: 2019-07-26 17:53 GMT

ಬೆಂಗಳೂರು, ಜು.26: ನಿರ್ಮಾಣ ಹಂತದ ಕಟ್ಟಡದ ಎದುರು ಹಾದುಹೊಗಿದ್ದ ವಿದ್ಯುತ್‌ ತಂತಿ ತಗುಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕೊಡಗೇಹಳ್ಳಿಯ ಶಿವಾರೆಡ್ಡಿ ಮೃತ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದಾರೆ.

ಅಮರಜ್ಯೋತಿ ಲೇಔಟ್‌ನಲ್ಲಿರುವ ಪಿಳ್ಳಪ್ಪ ಮತ್ತು ನವೀನ್ ಹಾಗೂ ಗುತ್ತಿಗೆದಾರ ಮಂಜುನಾಥ್ ಎಂಬುವವರಿಗೆ ಸೇರಿದ್ದ ಕಟ್ಟಡದ 3ನೆ ಮಹಡಿಯಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಶಿವಾರೆಡ್ಡಿ ಕೆಲಸ ಮುಗಿಸಿ ಮನೆಗೆ ಹೋಗಲು ಪೈಪ್‌ಗಳನ್ನು ಅಳವಡಿಸಿದ್ದ ವಿದ್ಯುತ್ ತಂತಿಯನ್ನು ಸುತ್ತಿ ಇಡುವಾಗ ಕಟ್ಟಡದ ಎದುರಿಗೆ ಹಾದು ಹೋಗಿದ್ದ ವಿದ್ಯುತ್ ವೈರ್ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.

ತಕ್ಷಣ ಸ್ಥಳಕ್ಕೆ ಸಂಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಶಿವಾರೆಡ್ಡಿ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿತ್ತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ದೂರು: ಈ ಕಟ್ಟಡದ ಎದುರು ವಿದ್ಯುತ್ ವೈರ್ ಹಾದುಹೋಗಿರುವುದನ್ನು ನೋಡಿ ಅಪಾಯವಿದೆ ಎಂದು ಕಟ್ಟಡ ಮಾಲಕರಿಗೆ ಹೇಳಿದ್ದರೂ ಸಹ ಅವರು ನಿರ್ಲಕ್ಷ್ಯ ವಹಿಸಿದ್ದರು. ಹಾಗಾಗಿಯೇ ತಂದೆ ಮೃತಪಟ್ಟಿದ್ದು, ಈ ಮೂವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ಪುತ್ರ ಅನೀಲ್ ರೆಡ್ಡಿ ದೂರು ಸಲ್ಲಿಸಿದ್ದಾರೆ.

ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News