ಕಗ್ಗತ್ತಲಲ್ಲಿ ಬೆಳಕಿನ ಕಿರಣ ಡಿ.ರಾಜಾ

Update: 2019-07-29 09:13 GMT

ಮಹಾರಾಷ್ಟ್ರದ ದಲಿತ ಪರ ಚಿಂತಕರ ಮೇಲೆ ನಡೆದ ದೌರ್ಜನ್ಯ ಮಿತಿ ಮೀರಿದೆ. ಇಂದಿಗೂ ಅವರು ಜೈಲುಪಾಲಾಗಿದ್ದಾರೆ. ಜನ ಚಳವಳಿಗಳನ್ನು ಹತ್ತಿಕ್ಕಲು ಮೋದಿ ಸರಕಾರ ಹೊಸ ಹೊಸ ಕರಾಳ ಕಾನೂನುಗಳನ್ನು ತರುತ್ತಿದೆ. ಇಂಥ ತೀವ್ರ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಡಿ. ರಾಜಾ ಕಮ್ಯುನಿಸ್ಟ್ ಪಕ್ಷದ ನೇತೃತ್ವ ವಹಿಸಿರುವುದು ಹೊಸ ಭರವಸೆ ಮೂಡಿಸಿದೆ. ಕ್ಗತ್ತಲಲ್ಲಿ ಬೆಳಕಿನ ಕಿರಣ ಕಾಣುತ್ತಿದೆ.

ಶತಮಾನದ ಹೊಸ್ತಿಲಲ್ಲಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದೇಶದ ಚುನಾವಣಾ ರಾಜಕಾರಣದಲ್ಲಿ ಅಪ್ರಸ್ತುತ ಆಗುತ್ತಿರಬಹುದು. ಆದರೆ, ಡಿ. ರಾಜಾ ಅವರಿಗೆ ಸಾರಥ್ಯ ನೀಡುವ ಮೂಲಕ ಅದು ಐತಿಹಾಸಿಕ ಹೆಜ್ಜೆ ಇರಿಸಿದೆ. ಯಾಕೆ ಐತಿಹಾಸಿಕ ಹೆಜ್ಜೆ ಅಂದರೆ ಬೇರೆ ಪಕ್ಷಗಳ ನಾಯಕತ್ವ ಕಾರ್ಪೊರೇಟ್ ಗುಲಾಮರ ಪಾಲಾಗುತ್ತಿರುವಾಗ, ಸಿಪಿಐ ನಾಯಕತ್ವ ದಲಿತ ಸಮುದಾಯದ ನಡುವಿನಿಂದ ಬಂದ ಕಾಮ್ರೇಡ್ ರಾಜಾ ಅವರ ಹೆಗಲಿಗೆ ಬಂದಿದೆ.

1925ರಲ್ಲಿ ಜನ್ಮತಾಳಿದ ಭಾರತ ಕಮ್ಯುನಿಸ್ಟ್ ಪಕ್ಷ ವಾಸ್ತವವಾಗಿ ದಮನಿತ ಸಮುದಾಯದ, ಏನೂ ಇಲ್ಲದವರ, ಎಲ್ಲವನ್ನೂ ಕಳೆದುಕೊಂಡವರ ಪಕ್ಷವಾದರೂ ಆರಂಭದಿಂದಲೂ ದಲಿತರ, ಆದಿವಾಸಿಗಳ ನೇತೃತ್ವ ಅದಕ್ಕೆ ಸಿಗಲೇ ಇಲ್ಲ. ಈ ದೇಶದಲ್ಲಿ ಅದನ್ನು ಕಟ್ಟಿ ನಡೆಸಿಕೊಂಡು ಬಂದವರು ಮೇಲ್ಜಾತಿಯ ಮತ್ತು ಮೇಲ್ವರ್ಗದ ಯುವಕರು.

ಕಳೆದ ಶತಮಾನದ ಮೊದಲ ದಶಕದಲ್ಲಿ ಮಾರ್ಕ್ಸ್ ವಾದವನ್ನು ಮೊದಲು ಓದಿ ದಕ್ಕಿಸಿಕೊಂಡವರು ಬಂಗಾಳದ ಮಾನವೇಂದ್ರನಾಥ ರಾಯ (ಎಂ.ಎನ್ .ರಾಯ್). ಈ ಎಂ.ಎನ್ ರಾಯ್ ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಒಡನಾಟ ಹೊಂದಿದವರು. ಲೆನಿನ್, ಸ್ಟಾಲಿನ್, ಮಾವೊ ಜೊತೆ ನಿಕಟ ಸಂಪರ್ಕ ಹೊಂದಿದವರು. ಈ ರಾಯ್ ಆಗ ಕರ್ನಾಟಕದಲ್ಲೂ ಪ್ರಭಾವ ಹೊಂದಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ, ಸಾಹಿತಿ ಶಾಂತಿನಾಥ ದೇಸಾಯಿ ಮತ್ತು ವಿಮರ್ಶಕ ಜಿ.ಎಸ್. ಆಮೂರ ಅವರು ಎಂ.ಎನ್.ರಾಯ್ ಪ್ರಭಾವಕ್ಕೆ ಒಳಗಾಗಿದ್ದರು. ಇಂಥ ರಾಯ್ ಲೆನಿನ್ ಜೊತೆ ಭಿನ್ನಾಭಿಪ್ರಾಯ ಹೊಂದಿ ಕಮ್ಯುನಿಸ್ಟ್ ಚಳವಳಿಯಿಂದ ಹೊರಗೆ ಬಂದು ರಾಡಿಕಲ್ ಹ್ಯೂಮನಿಸ್ಟ್ಟ್ ಪಾರ್ಟಿ ಕಟ್ಟಿದ್ದೇ ಒಂದು ಬೇರೆ ಕತೆ.

ಎಂ.ಎನ್. ರಾಯ್ ಹೊರಗೆ ಹೋದ ನಂತರ ಪೂರ್ಣಚಂದ್ರ ಜೋಶಿ, ಎಸ್.ಎ.ಡಾಂಗೆ ಹಾಗೂ ಭಗತ್‌ಸಿಂಗ್ ಒಡನಾಡಿಯಾಗಿದ್ದ ಅಜಯಘೋಷ, ಬಿ.ಟಿ.ರಣದಿವೆ, ಮೋಹನ ಕುಮಾರ ಮಂಗಳಂ, ಗಂಗಾಧರ ಅಧಿಕಾರಿ, ಪಿ.ಸುಂದರಯ್ಯ. ಸಿ .ರಾಜೇಶ್ವರರಾವ್. ಇ.ಎಂ.ಎಸ್. ನಂಬೂದಿರಿಪಾಡ. ಎ.ಕೆ.ಗೋಪಾಲನ್, ಭೂಪೇಶ ಗುಪ್ತ, ಜ್ಯೋತಿ ಬಸು, ಕೈಫಿ ಆಜ್ಮಿ ಹೀಗೆ ಆರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ವಹಿಸಿದವರು ಮೇಲ್ವರ್ಗದಿಂದ ಬಂದವರು.

ಅಂತಲೇ ನಾನು ಎಪ್ಪತ್ತರ ದಶಕದಲ್ಲಿ ಕಮ್ಯುನಿಸ್ಟ್ ಚಳವಳಿಯ ಒಡನಾಟಕ್ಕೆ ಬಂದಾಗ ಲೋಹಿಯಾವಾದಿಗಳು ಅದರಲ್ಲೂ ವಿಶೇಷವಾಗಿ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್, ಚಂಪಾ, ಪ್ರೊ.ನಂಜುಂಡಸ್ವಾಮಿ, ರಾಮದಾಸ್ ಮುಂತಾದವರು ನಮಗೆ ‘ನಿಮ್ಮದು ಬ್ರಾಹ್ಮಣರ ಪಕ್ಷ’ ಎಂದು ಛೇಡಿಸುತ್ತಿದ್ದರು. ಇವರಲ್ಲಿ ಕಲ್ಲೆಯಂಥವರು ನನಗೆ ಬರೆಯಲು ಪ್ರೋತ್ಸಾಹಿಸಿ ತಮ್ಮ ‘ಜನಪ್ರಗತಿ’ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟಿಸುತ್ತಿದ್ದರು. ಆಗ ಹಿರಿಯ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರ ಬೂಸಾ ಸಾಹಿತ್ಯದ ಮಾತು ರಾಜ್ಯದಲ್ಲಿ ವಿವಾದ ಉಂಟು ಮಾಡಿತ್ತು. ಬಸವಲಿಂಗಪ್ಪ ಅವರನ್ನು ಒಮ್ಮೆ ಭೇಟಿಯಾದಾಗಲೂ ಅವರು ನನಗೆ ಹಾಗೇ ಛೇಡಿಸಿದ್ದರು. ಆದರೆ ಕೆ.ಎಚ್.ರಂಗನಾಥ್ ಮಾತ್ರ ಕಮ್ಯುನಿಸ್ಟರ ಬಗ್ಗೆ ಗೌರವದಿಂದ ಮಾತಾಡುತ್ತಿದ್ದರು.

ಎಪ್ಪತ್ತರ ದಶಕದಲ್ಲಿ ಕಮ್ಯುನಿಸ್ಟ್ ಚಳವಳಿಗೆ ಬಂದಾಗ ಇಂಥ ಪ್ರಶ್ನೆಗಳನ್ನು ಪದೇ ಪದೇ ಎದುರಿಸಬೇಕಾಗುತ್ತಿತ್ತು. ನನಗೂ ಅಂತರಾಳದಲ್ಲಿ ‘ಕಮ್ಯುನಿಸ್ಟ್ ಪಾರ್ಟಿ ನಾಯಕತ್ವದಲ್ಲಿ ದಲಿತರೇಕೆ ಇಲ್ಲ’ ಎಂಬ ಪ್ರಶ್ನೆ ಎದುರಾಗುತಿತ್ತು. ಆಗ ಕನ್ನಡ ಸಾಹಿತ್ಯ ಲೋಕದಲ್ಲಿ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಚಂಪಾ ಅವರಂಥ ಲೋಹಿಯಾವಾದಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಸುಲಭವಿರಲಿಲ್ಲ. ಆದರೆ, ನನಗೆ ಇವರೆಲ್ಲರ ಬಗ್ಗೆ ಗೌರವ, ಒಡನಾಟವಿದ್ದರೂ ಲೋಹಿಯಾವಾದ ಯಾಕೋ ಇಷ್ಟವಾಗಲಿಲ್ಲ.

ಹೌದು, ಕಮ್ಯುನಿಸ್ಟ್ ಚಳವಳಿಯಲ್ಲಿ ಮೇಲ್ಜಾತಿಯ, ಮೇಲ್ವರ್ಗದ ನಾಯಕತ್ವವಿದ್ದರೂ ಅವರನ್ನು ಜಾತಿವಾದಿಗಳೆಂದು ಅವರ ಶತ್ರುಗಳೂ ಕರೆಯುವುದಿಲ್ಲ. ಆಗ ಅಕ್ಷರ ಮೊದಲು ದಕ್ಕಿದ್ದು ಇವರಿಗೆ. ಆಗರ್ಭ ಸಿರಿವಂತಿಕೆ, ಸಾಮಾಜಿಕ ಸ್ಥಾನಮಾನ ಇವನ್ನೆಲ್ಲ ಎಡಗಾಲಿನಲ್ಲಿ ಒದ್ದು ಕಮ್ಯುನಿಸ್ಟ್ ಚಳವಳಿಗೆ ಬಂದ ಸುಂದರಯ್ಯ, ರಾಜೇಶ್ವರರಾವ್, ಜ್ಯೋತಿ ಬಸು, ಭೂಪೇಶ ಗುಪ್ತ ಇವರೆಲ್ಲರ ಸೈದ್ಧಾಂತಿಕ ಬದ್ಧತೆ ಪ್ರಶ್ನಾತೀತ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅಂಥವರು ಕಮ್ಯುನಿಸ್ಟ್ ಚಳವಳಿಗೆ ಏಕೆ ಬರಲಿಲ್ಲ ಎಂಬ ಪ್ರಶ್ನೆ ನನ್ನನ್ನು ನಂತರ ತುಂಬ ಕಾಡುತ್ತಲೇ ಬಂತು.

ಕಮ್ಯುನಿಸ್ಟರು ಭಾರತದ ಜಾತಿಯ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ನನ್ನನ್ನು ನಂತರ ಕಾಡತೊಡಗಿತು. ಎಂಬತ್ತರ ದಶಕದಲ್ಲಿ ಮಹಾರಾಷ್ಟ್ರದ ಹಿರಿಯ ಕಮ್ಯುನಿಸ್ಟ್ ನಾಯಕ ಎಸ್.ಜಿ. ಸರ್ದೇಸಾಯಿ ಅವರು ಬರೆದ ಪುಸ್ತಕವೊಂದರಲ್ಲಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ‘ಭಾರತದ ಜಾತಿ ವ್ಯವಸ್ಥೆಯ ವಾಸ್ತವವನ್ನು ನಾವು ಕಮ್ಯುನಿಸ್ಟರು ಕಡೆಗಣಿಸಿದ್ದೇವೆ’ ಎಂದು ಅವರು ಒಪ್ಪಿಕೊಂಡಿದ್ದರು. ಆ ಪುಸ್ತಕವನ್ನು ದಸಂಸ ಸ್ಥಾಪಕರಲ್ಲಿ ಒಬ್ಬರಾದ ಬಿ.ಕೃಷ್ಣಪ್ಪನವರು ತುಂಬಾ ಇಷ್ಟಪಟ್ಟರು. ಮೆಜೆಸ್ಟಿಕ್‌ನಲ್ಲಿದ್ದ ನವಕರ್ನಾಟಕ ಬುಕ್ ಸ್ಟಾಲ್‌ಗೆ ಬಂದು ಈ ಪುಸ್ತಕದ ಅನೇಕ ಪ್ರತಿಗಳನ್ನು ಅವರು ಕೊಂಡು ಒಯ್ದು ಕಾರ್ಯಕರ್ತರಿಗೆ ಕೊಡುತ್ತಿದ್ದರು.

ಮೇಲ್ವರ್ಗದಲ್ಲಿ ಜನಿಸಿದ ರಾಜೇಶ್ವರರಾವ್, ಸುಂದರಯ್ಯ, ಭೂಪೇಶಗುಪ್ತ, ಜ್ಯೋತಿ ಬಸು, ಇಎಂಎಸ್ ಅವರ ತ್ಯಾಗ ಪ್ರಶ್ನಾತೀತ. ತಮ್ಮ ಸಾವಿರಾರು ಎಕರೆ ಭೂಮಿಯನ್ನು ಭೂರಹಿತ ರೈತರಿಗೆ ಹಂಚಿ ಪಾರ್ಟಿ ಕಮ್ಯೂನ್‌ನಲ್ಲಿ ಇರುತ್ತಿದ್ದ ಅವರ ಬದ್ಧತೆ ಬಗ್ಗೆ ಗೌರವವಿದೆ. ಆದರೆ, ಎಷ್ಟೇ ಬದ್ಧತೆ ಇದ್ದರೂ ಅಸ್ಪಶ್ಯತೆಯ ನೋವನ್ನುಂಡವರು ನಾಯಕತ್ವದಲ್ಲಿ ಬರದೆ ಜಾತಿ ವಾಸ್ತವ ಅರ್ಥವಾಗುವುದಿಲ್ಲ ಎಂದು ನನಗೆ ಅನಿಸುತ್ತಿತ್ತು.

ಭಾರತದಲ್ಲಿ ವರ್ಗ ಮಾತ್ರವಿಲ್ಲ ಜಾತಿ ತಾರತಮ್ಯವೂ ಇದೆ ಎಂಬುದನ್ನು ಕಮ್ಯುನಿಸ್ಟರು ಮೊದಲು ಒಪ್ಪಿಕೊಳ್ಳಲಿಲ್ಲ. ಇದೇಕೆ ಹೀಗೆ ಎಂದು ಕಮ್ಯುನಿಸ್ಟ್ ಚಳವಳಿಯ ಒಳಗಿದ್ದ ನಾವೆಲ್ಲ ಪ್ರಶ್ನಿಸುತ್ತಿದ್ದೆವು. ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಆಗ ನಮಗೆ ಓದಲು ಅಂಬೇಡ್ಕರ್ ಪುಸ್ತಕಗಳು ಸಿಗುತ್ತಿರಲಿಲ್ಲ. ನಮಗೆ ಬಾಬಾಸಾಹೇಬರ ಸಾಹಿತ್ಯ ಓದಲು ಸಿಕ್ಕಿದ್ದು ಎಂಬತ್ತರ ದಶಕದ ಮಧ್ಯದ ನಂತರ. ಅಂಬೇಡ್ಕರ್ ಸಾಹಿತ್ಯ ಓದಿದ ನಂತರ ಎಲ್ಲ ಗೊಂದಲಗಳು ನಿವಾರಣೆಯಾದವು

ತೊಂಬತ್ತರ ದಶಕದಲ್ಲಿ ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದ ನಂತರ ಭಾರತದ ಕಮ್ಯುನಿಸ್ಟರು ಜಾತಿ ತಾರತಮ್ಯ ಕರಾಳತೆಯನ್ನು ಒಪ್ಪಿಕೊಂಡರು. ಅದಕ್ಕಿಂತ ಮೊದಲು ದಲಿತರಿಗಾಗಿ ಕಮ್ಯುನಿಸ್ಟರು ಪ್ರಾಣ ಪಣಕ್ಕಿಟ್ಟು ಹೋರಾಡಿದರೂ ಜಾತಿ ವಾಸ್ತವವನ್ನು ಒಪ್ಪಿಕೊಂಡಿರಲಿಲ್ಲ. ಅಂತಲೇ ಬಹುತೇಕ ದಲಿತರು ಕಮ್ಯುನಿಸ್ಟ್ ಚಳವಳಿಯ ಸಮೀಪ ಬರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಕಮ್ಯುನಿಸ್ಟರು ಜಾತಿ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಸಮ್ಮೇಳನಗಳಲ್ಲಿ ಈಗ ಬಾಬಾ ಸಾಹೇಬರ, ಜ್ಯೋತಿಬಾ ಫುಲೆ ಅವರ ಫೋಟೊಗಳು ವೇದಿಕೆಯ ಮೇಲೆ ಕಾಣುತ್ತಿವೆ.

ಈಗ ಭಾರತ ಮೂಲದ ಹಿರಿಯ ಕಮ್ಯುನಿಸ್ಟ್ ಪಕ್ಷವಾದ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ತಮಿಳುನಾಡಿನ ದಲಿತ ಸಮುದಾಯದಿಂದ ಬಂದ ಡಿ. ರಾಜಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ರಾಜಾ ಸಿರಿವಂತರ ಮನೆಯಿಂದ ಬಂದವರಲ್ಲ. ಅವರ ತಾಯಿ, ತಂದೆ ಕೃಷಿ ಕಾರ್ಮಿಕರು. ಅವರ ವಾಸ ಗುಡಿಸಲಲ್ಲಿ. ತಮ್ಮ ಹಳ್ಳಿಯಿಂದ ಹತ್ತಾರು ಕಿ.ಮೀ. ನಡೆದು ಹೋಗಿ ಅಕ್ಷರ ಕಲಿತು ಪದವಿ ಸಂಪಾದಿಸಿದ ರಾಜಾ ಎಐಎಸ್‌ಎಫ್ ಮೂಲಕ ಕಮ್ಯುನಿಸ್ಟ್ ಚಳವಳಿ ಪ್ರವೇಶಿಸಿದರು.

ವ್ಯಾಸಂಗದ ನಂತರ ಎಐಎಸ್‌ಎಫ್, ಎಐವೈಎಫ್ ಪೂರ್ಣಾವಧಿ ಕಾರ್ಯಕರ್ತರಾಗಿ ದಿಲ್ಲಿಗೆ ಬಂದ ರಾಜಾ ಆ ನಂತರ ತಿರುಗಿ ನೋಡಲಿಲ್ಲ. ಮುಂದೆ ಕಮ್ಯುನಿಸ್ಟ್ ಪಕ್ಷಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಅವರ ಮದುವೆಯೂ ಕ್ರಾಂತಿಕಾರಿಯಾದದ್ದು. ಅವರ ಪತ್ನಿ ಕೇರಳದವರು. ಆ್ಯನಿ ಎಂದು ಅವರ ಹೆಸರು. ಆಕೆಯೂ ಪಾರ್ಟಿಯವರು. ಇವರ ಮದುವೆ ಬಗ್ಗೆ ಕೇರಳದ ಮಾಜಿ ಮುಖ್ಯ ಮಂತ್ರಿ ವಾಸುದೇವನ್ ನಾಯರ ಅವರ ಪುತ್ರಿ ಶಾರದಾ ಮೋಹನ್ ನಮಗೆ ಒಮ್ಮೆ ವಿವರವಾಗಿ ಸ್ವಾರಸ್ಯಕರವಾಗಿ ಹೇಳಿದ್ದರು. ಬೆಂಗಳೂರಿನಲ್ಲಿದ್ದ ಅವರು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ರಾಜಾ ಮತ್ತು ಆ್ಯನಿ ಮದುವೆಯನ್ನು ಕಾಮ್ರೇಡ್ ವಾಸುದೇವನ್ ನಾಯರ್ ಮುಂದೆ ನಿಂತು ಮಾಡಿದರು

ಮದುವೆಯಾದ ನಂತರ ತಮಿಳುನಾಡಿನ ರತಿರುವಣ್ಣಾಮಲೈ ಹತ್ತಿರದ ರಾಜಾ ಅವರ ಹಳ್ಳಿಗೆ ಪತಿಯೊಂದಿಗೆ ಆ್ಯನಿ ಹೋಗುತ್ತಾರೆ. ಟಾಯ್ಲೆಟ್ ಇಲ್ಲದ ಪುಟ್ಟ ಗುಡಿಸಲನ್ನು ನೋಡಿ ಅಚ್ಚರಿ ಪಡುತ್ತಾರೆ. ರಾಜಾ ಅವರ ನಿರಕ್ಷರಿ ತಾಯಿ ಸೊಸೆಯನ್ನು ಪ್ರೀತಿಯಿಂದ ಸ್ವಾಗತಿಸಿ ಬೀಫ್ ಬಿರಿಯಾನಿ ಮಾಡಿ ಬಡಿಸುತ್ತಾರೆ. ‘ನನ್ನ ಮಗನಿಗೆ(ರಾಜಾ) ಓದುವುದು, ಬರೆಯವುದು, ಪುಸ್ತಕ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಚೆನ್ನಾಗಿ ನೋಡಿಕೊಳ್ಳಮ್ಮ’ ಎಂದು ಹೇಳುತ್ತಾರೆ.

ಮುಂದೆ ರಾಜಾ, ಆ್ಯನಿ ದಿಲ್ಲಿಗೆ ಬರುತ್ತಾರೆ. ದಲಿತ ಸಮುದಾಯದಿಂದ ಬಂದ ರಾಜಾ ಸಿಪಿಐ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದಾಗ ಡಿಎಂಕೆಯ ಕರುಣಾನಿಧಿ ನೆರವಿಗೆ ಬರುತ್ತಾರೆ. ಹೀಗಾಗಿ ರಾಜಾ ಸಂಸದರಾಗುತ್ತಾರೆ. ಸದನದಲ್ಲಿ ಅಭ್ಯಾಸಪೂರ್ಣವಾಗಿ ಮಾತಾಡಿ ಒಳ್ಳೆಯ ಹೆಸರು ಮಾಡುತ್ತಾರೆ. ಇಂಥ ರಾಜಾ ಈಗ ಮುಖ್ಯ ವಾಹಿನಿಯಲ್ಲಿ ಇರುವ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯ ದರ್ಶಿಯಾಗಿದ್ದಾರೆ. ರಾಜಾ ಆಯ್ಕೆ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿತ್ತು.

ದೇಶದ ಸಂವಿಧಾನವನ್ನು ಬುಡಮೇಲು ಮಾಡಿ ಮನುವಾದಿ ಹಿಂದೂರಾಷ್ಟ್ರ ಕಟ್ಟಲು ಫ್ಯಾಶಿಸ್ಟ್ ಶಕ್ತಿಗಳು ಸಜ್ಜಾಗಿ ನಿಂತಿವೆ. ಈ ಸಂದರ್ಭದಲ್ಲಿ ಅವುಗಳನ್ನು ದಿಟ್ಟವಾಗಿ ಎದುರಿಸಿ ಹೋರಾಡಲು, ವಿಫಲಗೊಳಿಸಲು ಕಮ್ಯುನಿಸ್ಟರ, ಅಂಬೇಡ್ಕರ್‌ವಾದಿಗಳ ಏಕತೆ ಇಂದಿನ ಅನಿವಾರ್ಯತೆಯಾಗಿದೆ. ರಾಜಾ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ವಹಿಸಿರುವುದರಿಂದ ದಲಿತ ಸಂಘಟನೆಗಳು ಹಾಗೂ ಎಡ ಪ್ರಗತಿಪರ ಶಕ್ತಿಗಳನ್ನು ಒಂದುಗೂಡಿಸಿ ಪ್ರತಿರೋಧ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಮಹಾರಾಷ್ಟ್ರದ ದಲಿತ ಪರ ಚಿಂತಕರ ಮೇಲೆ ನಡೆದ ದೌರ್ಜನ್ಯ ಮಿತಿ ಮೀರಿದೆ. ಇಂದಿಗೂ ಅವರು ಜೈಲುಪಾಲಾಗಿದ್ದಾರೆ. ಜನ ಚಳವಳಿಗಳನ್ನು ಹತ್ತಿಕ್ಕಲು ಮೋದಿ ಸರಕಾರ ಹೊಸ ಹೊಸ ಕರಾಳ ಕಾನೂನುಗಳನ್ನು ತರುತ್ತಿದೆ. ಇಂಥ ತೀವ್ರ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಡಿ. ರಾಜಾ ಕಮ್ಯುನಿಸ್ಟ್ ಪಕ್ಷದ ನೇತೃತ್ವ ವಹಿಸಿರುವುದು ಹೊಸ ಭರವಸೆ ಮೂಡಿಸಿದೆ. ಕ್ಗತ್ತಲಲ್ಲಿ ಬೆಳಕಿನ ಕಿರಣ ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News