ಅನರ್ಹ ಶಾಸಕರ ಬಗ್ಗೆ ಬಿಜೆಪಿಗೇಕೆ ಅಷ್ಟೊಂದು ಕಾಳಜಿ: ಕಾಂಗ್ರೆಸ್ ಪ್ರಶ್ನೆ

Update: 2019-07-29 05:48 GMT

ಬೆಂಗಳೂರು, ಜು.29: ಅನರ್ಹ ಶಾಸಕರ ಬಗ್ಗೆ ಬಿಜೆಪಿ ‘ಕಾಳಜಿ’ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪಕ್ಷಾಂತರಿ ಶಾಸಕರನ್ನು ವಿಧಾನಸಭಾ ಅಧ್ಯಕ್ಷರು ಅನರ್ಹಗೊಳಿಸಿದರೆ ಬಿಜೆಪಿ ನಾಯಕರು ಹೊಟ್ಟೆ ಉರಿದುಕೊಳ್ಳುವುದು ಯಾಕೆ? ಅವರ ಮೇಲೆ ಈ ಪರಿಯ ಕಾಳಜಿ ಯಾಕೆ? ಅವರೇನು ಇವರ ಪಕ್ಷದ ಶಾಸಕರೇ? ಎಂದು ಕಿಡಿಕಾರಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸ್ಪೀಕರ್ ಆದೇಶವನ್ನು ಬಿಜೆಪಿಯವರು ವಿರೋಧಿಸಿದ್ದಾರೆ. ಬಿಜೆಪಿಯವರಿಗೆ ಯಾಕೆ ಅಷ್ಟು ಕಾಳಜಿ ಗೊತ್ತಾಗಲಿಲ್ಲ. ಬಿಜೆಪಿ ಸ್ಪೀಕರ್ ಅವರ ತೀರ್ಪನ್ನು ಶ್ಲಾಘನೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಪಕ್ಷಾಂತರ ವ್ಯಕ್ತಿಗಳಿಗೆ ಇದು ತಕ್ಕ ಶಾಸ್ತಿಯಾಗಿದೆ ಇದನ್ನ ಬಿಟ್ಟು ತೀರ್ಪನ್ನು ವಿರೋಧಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿರುವ ಅವರು, ಈ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆಯೂ ಉಳಿದಿಲ್ಲ. ಅವರ ಅವಧಿಯಲ್ಲಿ ಸ್ಪೀಕರ್ ಕಾನೂನು ಬಾಹಿರ ಕ್ರಮ ತೆಗೆದುಕೊಂಡಿದ್ದರು ಎಂದು ಆರೋಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News