ನಂಬಿದವರನ್ನು ಬಿಜೆಪಿ ಬೀದಿಗೆ ತಂದು ನಿಲ್ಲಿಸಿದೆ: ಮಾಜಿ ಸಚಿವ ಶಿವರಾಜ್ ತಂಗಡಗಿ

Update: 2019-07-29 17:48 GMT

ಕೊಪ್ಪಳ, ಜು.29: ನಂಬಿದವರನ್ನು ಬೀದಿಗೆ ತಂದು ನಿಲ್ಲಿಸಿ ಇದೀಗ ಬಿಜೆಪಿ ಸೇಫ್ ಆಗಿದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರನ್ನು ಮುಂಬೈಗೆ ಕಳಿಸಿ, ಅವರು ಸದನಕ್ಕೆ ಬಾರದಂತೆ ಮಾಡಿ ಮೈತ್ರಿ ಸರಕಾರವನ್ನು ಬೀಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅವರನ್ನು ನಂಬಿದ ಶಾಸಕರು ಈಗ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅತೃಪ್ತರನ್ನು ಬೀದಿಗೆ ತಂದು ನಿಲ್ಲಿಸಿ ಬಿಜೆಪಿ ಸೇಫ್ ಆಗಿದೆ. ಮತ್ತೊಬ್ಬರನ್ನು ಹಾಳು ಮಾಡಿ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಏನೂ ಇಲ್ಲ. ಅತೃಪ್ತರು ತಮ್ಮ ಮಾನ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರ ಮೇಲೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಯಾರನ್ನೂ ರಾಜೀನಾಮೆ ನೀಡಿ ಎಂದು ಅಥವಾ ಸರಕಾರ ಬೀಳಿಸಿ ಎಂದು ಹೇಳಿಲ್ಲ. ಅತೃಪ್ತರ ನಡೆಯಿಂದ ಸಿದ್ದರಾಮಯ್ಯ ಸಾಕಷ್ಟು ನೊಂದಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯರ ಜತೆ ನಾನಿದ್ದಾಗಲೇ ಅತೃಪ್ತ ಶಾಸಕರು ಕರೆ ಮಾಡಿ ನಮ್ಮನ್ನು ಅನರ್ಹ ಮಾಡಬೇಡಿ, ಎಲ್ಲರೂ ವಾಪಸ್ಸು ಬರುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು ಎಂದು ಇದೇ ವೇಳೆ ಶಿವರಾಜ್ ತಂಗಡಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News