ಮಹಾರಾಷ್ಟ್ರ ಸರಕಾರದ ಮೇಲೆ ಕೇಂದ್ರದ ಮೂಲಕ ಒತ್ತಡ ಹೇರಲು ಸಿದ್ದರಾಮಯ್ಯ ಸಲಹೆ
Update: 2019-08-08 13:32 GMT
ಬೆಂಗಳೂರು, ಆ. 8: ‘ಉತ್ತರ ಕರ್ನಾಟಕದ ಪ್ರವಾಹ ಸ್ಥಿತಿಗೆ ಕೊಯ್ನಿ ಜಲಾಶಯದಿಂದ ಬಿಡುಗಡೆಯಾಗುತ್ತಿರುವ ಭಾರೀ ಪ್ರಮಾಣದ ನೆರೆ ನೀರು ಕಾರಣ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಯಡಿಯೂರಪ್ಪನವರು ತಕ್ಷಣ ಕಾರ್ಯಪ್ರವರ್ತರಾಗಿ ಕೊಯ್ನಿ ಜಲಾಶಯದ ನೀರಿನ ಬಿಡುಗಡೆಯನ್ನು ನಿಯಂತ್ರಿಸುವಂತೆ ಮಹಾರಾಷ್ಟ್ರ ಸರಕಾರದ ಮೇಲೆ ಕೇಂದ್ರ ಸರಕಾರದ ಮೂಲಕ ಒತ್ತಡ ಹೇರಬೇಕು’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಲಹೆ ನೀಡಿದ್ದಾರೆ.
‘ಉತ್ತರ ಕರ್ನಾಟಕದ ಜನತೆ ಭಾರೀ ಪ್ರಮಾಣದ ಪ್ರವಾಹ ಪರಿಸ್ಥಿತಿಯಿಂದಾಗಿ ಕಷ್ಟ ನಷ್ಟಕ್ಕೀಡಾಗಿ ಕಂಗಾಲಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಅವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಪ್ರವಾಹ ಪೀಡಿತರ ನೆರವಿಗೆ ತಕ್ಷಣ ಧಾವಿಸಬೇಕೆಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್ನಲ್ಲಿ ಮನವಿ ಮಾಡಿದ್ದಾರೆ.