ಅತಿವೃಷ್ಟಿಗೆ ರಾಜ್ಯ ಆಡಳಿತ ಜವಾಬ್ದಾರಿಯುತವಾಗಿ ಸ್ಪಂದಿಸುತ್ತಿದೆ: ಸದಾನಂದ ಗೌಡ

Update: 2019-08-08 17:32 GMT

ಬೆಂಗಳೂರು, ಆ.8: ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯ ಆಡಳಿತವು ಚುರುಕುಗತಿಯಲ್ಲಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅತ್ಯಂತ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕದಲ್ಲಿ ತಾವೇ ಮುಂದಾಗಿ ನಿಂತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ಜನ ಪ್ರತಿನಿಧಿಗಳನ್ನು ಒಳಗೊಂಡ ನಿರ್ವಹಣಾ ತಂಡ ರಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಇಂದು ಕೊಡಗು, ಉತ್ತರ ಕನ್ನಡ , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಈ ತನಕ ಯಾವುದೇ ಜೀವ ಹಾನಿ ಆಗಿಲ್ಲವೆಂದು, ಅಗತ್ಯವಿರುವೆಡೆಗೆ ನಿರಾಶ್ರಿತರ ಕೇಂದ್ರ, ಪರಿಹಾರ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಸರ್ವ ಸನ್ನದ್ಧವಾಗಿ ಇಟ್ಟಿದ್ದೇವೆಂದು ಮಾಹಿತಿ ನೀಡಿದ್ದಾರೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

ಉತ್ತರ ಕನ್ನಡದಲ್ಲಿ 5 ಅಣೆಕಟ್ಟುಗಳ ಗೇಟ್ ತೆಗೆದು ನೀರನ್ನು ಬಿಟ್ಟಿರುವ ಕಾರಣ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆಯೆಂದು ತಿಳಿಸಿದ್ದಾರೆ. ಅಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ 2500 ಜನರಷ್ಟು ಇದ್ದು ಜಿಲ್ಲಾಡಳಿತ ಅಗತ್ಯ ಪರಿಹಾರ ಕ್ರಮ ತೆಗೆದುಕೊಂಡಿರುವುದನ್ನು ವಿವರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನ ಪ್ರತಿನಿಧಿಗಳಾದ ರಘುಪತಿ ಭಟ್, ಲಾಲ್ಜಿ ಮೆಂಡನ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೆ ಭೀತಿ ಪಡಬಾರದು. ಕೇಂದ್ರ ಸರಕಾರ, ರಾಜ್ಯ ಸರಕಾರ ಅವರ ಜೊತೆ ಇದೆ. ಇಂದು ಸಂಜೆ ನಾನು ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ. ಕೆಲ ಅತಿವೃಷ್ಟಿ ಪ್ರವಾಹ ಸ್ಥಳಗಳಿಗೆ ನಾಳೆ ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಜನತೆ ಕೂಡಾ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ತಮ್ಮ ಸಂಬಂಧಿಕರು, ಮಿತ್ರರೊಂದಿಗೆ ಸಂಪರ್ಕದಲ್ಲಿದ್ದು ಜಿಲ್ಲಾ ಪರಿಹಾರ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಕೊಡಬೇಕೆಂದು ಕೋರಿಕೆ. ಹಾಗೂ ನನ್ನ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಾಕಿದರೆ ಸಂಬಂಧಿಸಿದ ಜಿಲ್ಲಾಡಳಿತಕ್ಕೆ ರವಾನಿಸಿ ಸೂಕ್ತ ಪರಿಹಾರ ಕ್ರಮ ತೆಗೆದುಕ್ಕೊಳ್ಳಲಾಗುವುದು ಎಂದು ಸದಾನಂದಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News