ಕಾಶ್ಮೀರದ ವಾಸ್ತವತೆಯನ್ನು ಬದಲಿಸಲು ಭಾರತಕ್ಕೆ ಸಾಧ್ಯವಿಲ್ಲ: ಪಾಕಿಸ್ತಾನದ ಸೇನಾ ವರಿಷ್ಠ ಬಾಜ್ವಾ
Update: 2019-08-15 17:30 GMT
ಇಸ್ಲಾಮಾಬಾದ್, ಆ.15: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಭಾರತದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಸೇನಾ ವರಿಷ್ಠ ಖಮರ್ ಜಾವೇದ್ ಬಾಜ್ವಾ ಕಾಶ್ಮೀರದ ಕುರಿತ ವಾಸ್ತವತೆಯನ್ನು 1947ರಲ್ಲಿ ಸಹಿಹಾಕಲಾದ ಅಕ್ರಮವಾದ ಕಾಗದದ ತುಂಡಿನಿಂದಾಗಲಿ ಅಥವಾ ಈಗಿನ ಮತ್ತು ಭವಿಷ್ಯದಲ್ಲಿನ ಯಾವುದೇ ಕ್ರಮದಿಂದ ಬದಲಾಯಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.
ಪಾಕಿಸ್ತಾನದ ಸ್ವಾತಂತ್ರ ದಿನವಾದ ಬುಧವಾರ ದೇಶಕ್ಕೆ ನೀಡಿದ ಸಂದೇಶವೊಂದರಲ್ಲಿ ಅವರು, ಕಾಶ್ಮೀರ ವಿಷಯದಲ್ಲಿ ಯಾವುದೇ ಸಂಧಾನ ಸಾಧ್ಯವಿಲ್ಲವೆಂದು ಬಾಜ್ವಾ ಘೋಷಿಸಿರುವುದಾಗಿ ಪಾಕ್ನ ಬೇಹುಗಾರಿಕಾ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮಹಾನಿರ್ದೇಶಕರು ಟ್ವೀಟ್ ಮಾಡಿದ್ದಾರೆ.
ಜಮ್ಮುಕಾಶ್ಮೀರದ ವಿಷಯದಲ್ಲಿ ತನ್ನ ಪಾತ್ರವನ್ನು ನಿರ್ವಹಿಸುವ ರಾಷ್ಟ್ರೀಯ ಕರ್ತವ್ಯವಾಗಿದ್ದು, ಅದಕ್ಕನುಗುಣವಾಗಿ ಪಾಕ್ ನಡೆದುಕೊಳ್ಳಲಿದೆಯೆಂದು ಜ. ಬಾಜ್ವಾ ತಿಳಿಸಿದರು.