ಪ್ರವಾಹ: ವಿದ್ಯಾರ್ಥಿಗಳಿಗೆ ಉಚಿತ ಅಂಕಪಟ್ಟಿ ನೀಡಲು ಪರಿಷತ್ ಸದಸ್ಯ ಎನ್.ರವಿಕುಮಾರ್ ಮನವಿ
Update: 2019-08-17 13:13 GMT
ಬೆಂಗಳೂರು, ಆ.17: ಪ್ರವಾಹದ ಹಿನ್ನೆಲೆಯಲ್ಲಿ ದಾಖಲಾತಿ ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿ ಹಾಗೂ ಪೂರಕ ದಾಖಲೆಗಳನ್ನು ಉಚಿತವಾಗಿ ಮತ್ತು ಶೀಘ್ರವೇ ನೀಡಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪರಿಷತ್ ಸದಸ್ಯ ಎನ್.ರವಿಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ನೆರೆ ಹಾವಳಿಯಿಂದ ಬಹುತೇಕ ವಿದ್ಯಾರ್ಥಿಗಳ ಅಂಕಪಟ್ಟಿ ಸೇರಿದಂತೆ ಇನ್ನಿತರ ದಾಖಲಾತಿಗಳು ಹಾಳಾಗಿವೆ. ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಡ ವಿದ್ಯಾರ್ಥಿಗಳ ಪರ ನಿಲ್ಲುವುದು ಮಾನವೀಯ ನೆಲೆಯಲ್ಲಿ ಸಮರ್ಪಕ ಎಂದು ಹೇಳಿದ್ದಾರೆ.
ಎಸೆಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಅಂಕಪಟ್ಟಿ ಸೇರಿದಂತೆ ಇತರೆ ಶೈಕ್ಷಣಿಕ ದಾಖಲೆಗಳು ಹಾಳಾಗಿ ಕಳೆದು ಹೋಗಿವೆ. ಆದುದರಿಂದ ಇಲಾಖೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಂಕಪಟ್ಟಿ ನೀಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಅವರು ಕೋರಿದ್ದಾರೆ.