ರಾಜೀವ್ ಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆ: ಗಿಡ ನೆಡುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು, ಆ.20: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 75ನೇ ಜನ್ಮ ದಿನಾಚರಣೆ ಹಿನ್ನೆಲೆ ಸೇವಾದಳ ಯಂಗ್ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿರುವ ಗಿಡ ನೆಡುವ ವಿಶೇಷ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಮಂಗಳವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ, ಚಾಲನೆ ನೀಡಿದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೇವಾದಳ ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಪಿ.ಕೆ.ಜುನೈದ್, ರಾಜೀವ್ಗಾಂಧಿ ದೂರದೃಷ್ಠಿಯ ನಾಯಕರಾಗಿದ್ದರು. ವಿಶೇಷವಾಗಿ ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿದ್ದ ಅವರ ದಿಟ್ಟ ತೀರ್ಮಾನದಿಂದ ಭಾರತ ಇಂದು ಪ್ರಪಂಚದ 3ನೇ ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯವಾಯಿತು ಎಂದರು.
ದೇಶದ ಯುವಜನರಿಗೆ ರಾಜೀವ್ ಗಾಂಧಿಯವರ ಕೆಲಸಗಳ ಬಗ್ಗೆ ತಿಳಿಸುವ ಕಾರ್ಯ ನಡೆಯಬೇಕು. ಅಲ್ಲದೆ, ಅವರಲ್ಲಿನ ಪರಿಸರ ಕಾಳಜಿ ಎಲ್ಲರಿಗೂ ತಿಳಿಯಪಡಿಸುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬ್ರಿಗೇಡ್ನ ರಮೇಶ್ ಕುಮಾರ್, ಮಂಜೇಶ್, ರವಿಕುಮಾರ್, ಜೀಲಾನಿ, ಅಬೂಬಕ್ಕರ್, ರೆಹ್ಮಾನ್, ಬಶೀರ್ ಸೇರಿದಂತೆ ಪ್ರಮುಖರಿದ್ದರು.