ದೂರವಾಣಿ ಕದ್ದಾಲಿಕೆ ಪ್ರಕರಣ: ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಎಚ್.ಕೆ. ಪಾಟೀಲ್ ಮನವಿ

Update: 2019-08-21 06:18 GMT

ಬೆಂಗಳೂರು: ಪತ್ರಕರ್ತರು, ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅವರ ಖಾಸಗಿತನಕ್ಕೆ ಧಕ್ಕೆಯಾಗಿದ್ದರೆ ಅದಕ್ಕೆ ಗೌರವವಿಲ್ಲವೇ ಎಂದು ಪ್ರಶ್ನಿಸಿರುವ ಎಚ್.ಕೆ. ಪಾಟೀಲ್, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಪತ್ರಕರ್ತರು ಮತ್ತು ಶ್ರೀಸಾಮಾನ್ಯರ ದೂರವಾಣಿಗಳು ಕದ್ದಾಲಿಕೆಯಾಗಿದ್ದರೆ ಅದನ್ನೂ ಸಹ ತನಿಖೆಯ ವ್ಯಾಪ್ತಿಗೆ ತರಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

“ ತನಿಖೆಯ ಸಂದರ್ಭ ಎಲ್ಲಾ ಸತ್ಯಗಳು ಹೊರಬರಬೇಕು. ನೀತಿಗೆಟ್ಟ ಅಕ್ರಮಗಳು, ಲಂಚ ವ್ಯವಹಾರಗಳು, ರಾಜ್ಯದ್ರೋಹದ ಕೆಲಸಗಳು, ಕಾನೂನು ಬಾಹಿರ ಕೆಲಸಗಳು ಈ ಕದ್ದಾಲಿಕೆಯಿಂದ ಲಭ್ಯವಾಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಬಹಿರಂಗಗೊಂಡ ಗಂಭೀರವಾದ ಕ್ರಿಮಿನಲ್ ಪ್ರಕರಣಗಳು ಮತ್ತು ಅದರ ಭಾಗಿಯಾದ ಮತ್ತು ಅಂಥ ಅಪರಾಧಿಕ ಪ್ರಕರಣಗಳಿಗೆ ನೆರವು ನೀಡಿದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮಗಳಾಗಬೇಕು ಎಂದು ಮನವಿ ಮಾಡಿದ್ದಾರೆ.

ದೂರವಾಣಿ ಕದ್ದಾಲಿಕೆಯಂತಹ ಆರೋಪಗಳು ಬಹು ಗಂಭೀರವಾದ ದೂರಗಾಮಿ ಪರಿಣಾಮಗಳನ್ನುಂಟು ಮಾಡುವುದರಿಂದ ಇಂಥ ಆರೋಪಗಳ ಎಲ್ಲ ಆಯಾಮಗಳು ತನಿಖೆಯ ವ್ಯಾಪ್ತಿಗೊಳಪಡಬೇಕು. ವ್ಯಕ್ತಿಯೊಬ್ಬರ ಖಾಸಗಿತನದಲ್ಲಿ ನೇರವಾದ ಮಧ್ಯಪ್ರವೇಶ ಶ್ರೀಸಾಮಾನ್ಯನ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವ ನೇರವಾದ ಪ್ರಯತ್ನ ಇದಾಗುತ್ತದೆ. ಆದಾಗ್ಯೂ ಇಂತಹ ಕದ್ದಾಲಿಕೆ ನಡೆದಿದ್ದರೆ ಅಂಥ ಸಂದರ್ಭದಲ್ಲಿ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸಂಭವಿಸಿರುವ ಅಪರಾಧ ಪ್ರಕರಣಗಳು ತನಿಖೆಗೆ ಒಳಪಡಬೇಕು. ಸತ್ಯ ಸಾರ್ವಜನಿಕರಿಗೆ ಲಭ್ಯವಾಗಬೇಕು. ತನ್ಮೂಲಕ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡುವ ಕ್ರಮಗಳಿಗೆ ಇಂಬು ಕೊಡಬೇಕು. ಇಂಥ ತನಿಖೆಗಳು ಕೇವಲ ಸಂಕುಚಿತ ಉದ್ದೇಶವನ್ನಿಟ್ಟುಕೊಂಡು ರಾಜಕೀಯ ಪ್ರತಿಕಾರದ ಕ್ರಮಗಳಾಗಿ ಬಳಕೆಯಾಗಬಾರದು. ಬದಲಿಗೆ ನಿಜವಾಗಿ ನಡೆದಿರುವ ಅಪರಾಧಗಳು 

ನೀತಿಗೆಟ್ಟ ಕ್ರಮಗಳು ಮುಂತಾದವುಗಳು ತನಿಖೆಯಾಗಿ ಇವುಗಳಲ್ಲಿ ಭಾಗಿಯಾದವರಿಗೆ ಮತ್ತು ಕಾರಣೀಕರ್ತರಾದ ಅಧಿಕಾರಿಗಳಿಗೆ ಸೂಕ್ತವಾದ ಶಿಕ್ಷೆಯಾಗುವಲ್ಲಿ ಗಂಭೀರವಾದ ಪಾತ್ರವಹಿಸಬೇಕು. ಅದಕ್ಕಾಗಿ ಪರಿಣಾಮಕಾರಿಯಾದ ತನಿಖೆಯಾಗುವಂತೆ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಿ ಎಲ್ಲ ಅಂಶಗಳನ್ನು ಒಳಗೊಂಡ ಆದೇಶ ಹೊರಡಿಸಬೇಕೆಂದು ಆಗ್ರಹಿಸುವೆ” ಎಂದು ತಮ್ಮ ಎರಡು ಪುಟದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News