ಪ್ರಧಾನಿ ಮೋದಿಗೆ ಜನ ಸಾಮಾನ್ಯರ ಸಂಕಷ್ಟಗಳ ಬಗ್ಗೆ ತಾತ್ಸಾರ: ದಿನೇಶ್ ಗುಂಡೂರಾವ್

Update: 2019-09-07 12:57 GMT

ಬೆಂಗಳೂರು, ಸೆ.7: ಪ್ರಧಾನಿ ನರೇಂದ್ರ ಮೋದಿ ಜನ ಸಾಮಾನ್ಯರ ಸಂಕಷ್ಟಗಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಾರೆ, ನೆರೆ ಸಂತ್ರಸ್ತರ ಕಷ್ಟ ಕೇಳಿ ತಕ್ಷಣವೇ ಪರಿಹಾರ ಘೋಷಿಸುತ್ತಾರೆಂದು ಬಿ.ಎಸ್.ಯಡಿಯೂರಪ್ಪ ಜನರನ್ನು ನಂಬಿಸಿದ್ದರು. ಆದರೆ, ಪ್ರಧಾನಿ ಮೋದಿ ಇಸ್ರೋಗೆ ಬಂದು ಹಾಗೆಯೆ ತೆರಳಿದ್ದಾರೆ. ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಪ್ರಧಾನಿ ಇಷ್ಟೊಂದು ತಾತ್ಸಾರದ ಮನೋಭಾವ ಹೊಂದಿರಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ 22 ಜಿಲ್ಲೆಗಳು ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಿ ಹೋದರು. ಆಗಲೂ ಹಣ ಬಂದಿಲ್ಲ. ಕೇಂದ್ರದಿಂದ ಅಧಿಕಾರಿಗಳ ತಂಡ ಬಂದು ಸಮೀಕ್ಷೆ ಮಾಡಿ ಹೋಗಿ ವಾರ ಕಳೆದಿದೆ. ಈಗಲೂ ಹಣ ಬಂದಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದು ಹಾಗೆಯೇ ಹೋಗಿದ್ದಾರೆ. ಇವರಿಂದ ಜನತೆ ಯಾವ ಭರವಸೆಯನ್ನು ಇಟ್ಟುಕೊಳ್ಳಲು ಸಾಧ್ಯವೆಂದು ಅವರು ಪ್ರಶ್ನಿಸಿದರು.

ನೆರೆ ಪೀಡಿತ ಪ್ರದೇಶಗಳ ಜನರ ತಾಳ್ಮೆಯ ಕಟ್ಟೆ ಹೊಡೆದಿದೆ. ಅವರನ್ನು ಸಮಾಧಾನಪಡಿಸಲು ಬಿಜೆಪಿಯ ನಾಯಕರು ಸೆ.7ರಂದು ಪ್ರಧಾನಮಂತ್ರಿ ಬೆಂಗಳೂರಿಗೆ ಬರುತ್ತಿದ್ದಾರೆ. ಪರಿಹಾರದ ಹಣ ಘೋಷಣೆ ಮಾಡುತ್ತಾರೆ ಎಂದು ಹೇಳುತ್ತಿದ್ದರು. ಪ್ರಧಾನಿ ರಾಜ್ಯಕ್ಕೆ ಬಂದಿದ್ದು ನಿಜ. ಆದರೆ, ಪರಿಹಾರ ಘೋಷಣೆ ಎಲ್ಲಿ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಜನತೆಗೆ ವಿಶ್ವಾಸ ದ್ರೋಹ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಬಿಜೆಪಿ ನಾಯಕರಿಗೆ ಧೈರ್ಯ, ತಾಕತ್ತು ಇಲ್ಲ. ಮೋದಿ ಎದುರು ನಿಂತು ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಅವರಿಗೆ ತಿಳಿಸಲು ಇವರಿಂದ ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗ ಭೇಟಿಗೆ ಸಮಯ ನೀಡುವಂತೆ ಮನವಿ ಮಾಡಿತ್ತು. ನೆರೆ ಸಂತ್ರಸ್ತರ ಕುರಿತ ಮನವಿಯನ್ನೂ ಸಿದ್ದಪಡಿಸಿಟ್ಟುಕೊಂಡಿದ್ದೆವು. ಆದರೆ, ನಮಗೆ ಮೋದಿ ಅವರು ಸಮಯ ನೀಡಲಿಲ್ಲ ಎಂದು ಅವರು ಹೇಳಿದರು.

ಚಂದ್ರಯಾನ-2ಅನ್ನು ವೀಕ್ಷಣೆ ಮಾಡಲು ಬೆಂಗಳೂರಿನ ಇಸ್ರೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಶನಿವಾರ) ಬೆಳಗ್ಗೆ ವಾಪಸ್ ಹೋಗಿದ್ದಾರೆ. ನಿನ್ನೆ ಸಂಜೆಯಿಂದ ಮಧ್ಯರಾತ್ರಿ 1.30ರವರೆಗೂ ಸಮಾಯವಕಾಶವಿದ್ದರೂ ನೆರೆಯ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿಲ್ಲ. ಬೆಳಗ್ಗೆ ಕೂಡ ನೆರೆ ಸಂತ್ರಸ್ತರ ಬಗ್ಗೆ ಒಂದು ಮಾತನ್ನೂ ಆಡಿಲ್ಲ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News