ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸ್ಪೀಕರ್ ಕಾಗೇರಿ

Update: 2019-10-10 13:39 GMT

ಬೆಂಗಳೂರು, ಅ.10: ಒಂದೆಡೆ ಬರ ಮತ್ತು ಮತ್ತೊಂದೆಡೆ ನೆರೆಯ ಸಮಸ್ಯೆಗೆ ತುತ್ತಾಗಿ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಈ ಕುರಿತು ತಾವು ನೀಡಿರುವ ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಮಾಡಿದ ಒತ್ತಾಯಕ್ಕೆ ಮಣಿಯದೆ ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರು. 

ಗುರುವಾರ ಆರಂಭವಾದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ವಿಧಾನಸಭೆ ಕಾರ್ಯದರ್ಶಿಗಳ ವರದಿ ಹಾಗೂ ವಿವಿಧ ಸಮಿತಿಗಳ ವರದಿ ಮಂಡನೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಿದ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸ್ಪೀಕರ್ ಹೇಳಿದರು.

ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ನಂತರ ನಿಯಮ 60 ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆಲೆಯಲ್ಲಿ ನಿಲುವಳಿ ಸೂಚನೆ ಕುರಿತ ಪ್ರಾಥಮಿಕ ಚರ್ಚೆಗೆ ಪಟ್ಟುಹಿಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ನೆರೆ ಸಂತ್ರಸ್ತರ ಬಗ್ಗೆ ವಿರೋಧ ಪಕ್ಷದವರು ಚರ್ಚೆ ಮಾಡಲಿ, ಅದಕ್ಕೆ ನಮ್ಮ ತಕರಾರು ಇಲ್ಲ. ಸರಕಾರ ಎಲ್ಲದಕ್ಕೂ ಉತ್ತರಿಸಲು ಸಿದ್ಧವಿದೆ. ಈಗ ನಿಗದಿಯಂತೆ ಕಾರ್ಯಕಲಾಪ ನಡೆಯಲಿ ಎಂದರು.

ರಾಜ್ಯದ ಅರ್ಧದಷ್ಟು ಭಾಗ ಪ್ರವಾಹದಲ್ಲಿ ಮುಳುಗಿ ಹೋಗಿದೆ, ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಶತಮಾನದ ಬಳಿಕ ಇಂತಹ ಘೋರ ಪ್ರವಾಹಕ್ಕೆ ನಮ್ಮ ರಾಜ್ಯ ಸಾಕ್ಷಿಯಾಗಿದೆ. ಸಂತ್ರಸ್ತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇಂತಹ ಗಂಭೀರ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಸದಸ್ಯರಾದ ಕೆ.ಆರ್.ರಮೇಶ್ ಕುಮಾರ್, ಕೃಷ್ಣಭೈರೇಗೌಡ ಹಾಗೂ ಎಚ್.ಕೆ.ಪಾಟೀಲ್, ಕಲಾಪದ ಕಾರ್ಯ ವಿಧಾನದಲ್ಲಿನ ನಿಯಮಾವಳಿಗಳನ್ನು ಉಲ್ಲೇಖಿಸಿದರು. ಆದರೂ, ಸ್ಪೀಕರ್ ಮನವೊಲಿಕೆ ಸಾಧ್ಯವಾಗಲಿಲ್ಲ. ಇದರಿಂದ ಕೆರಳಿದ ಸಿದ್ದರಾಮಯ್ಯ, ಸ್ಪೀಕರ್ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಆದರೆ, ಇಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕೆಲಸ ನಡೆಯುತ್ತಿದೆ. ಸ್ಪೀಕರ್ ಸರಕಾರದ ಕಿವಿ ಹಿಂಡುವ ಬದಲು, ಅವರ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬೇಡಿ. ಆದರೆ, ಇದಾವುದಕ್ಕೂ ಜಗ್ಗದ ಸ್ಪೀಕರ್ ಕಾರ್ಯಸೂಚಿಯಂತೆ ಕಲಾಪವನ್ನು ಮುಂದುವರೆಸಿದರು. ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಿದರು.

ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷ ಅರಗ ಜ್ಞಾನೇಂದ್ರ, 2018-19ನೆ ಸಾಲಿನ ಸಮಿತಿಯ 28ನೆ ವರದಿಯನ್ನು ಒಪ್ಪಿಸಿದರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಅಂಗಾರ ಸಮಿತಿಯ ಎರಡನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು. ನಂತರ, ಮುಖ್ಯಮಂತ್ರಿ ಯಡಿಯೂರಪ್ಪ,ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ 2017-18ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಸಭೆಯ ಮುಂದಿಟ್ಟರು. ಅಲ್ಲದೆ, ಮಾರ್ಚ್ 2018ಕ್ಕೆ ಅಂತ್ಯಗೊಂಡ ರಾಜಸ್ವ ವಲಯದ ಮೇಲಿನ ವರದಿ ಹಾಗೂ ಆರ್ಥಿಕ ವಲಯದ ಮೇಲಿನ ವರದಿಗಳನ್ನು ಸಭೆಯ ಮುಂದಿಟ್ಟರು.

ತದನಂತರ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವಥ್‌ ನಾರಾಯಣ ಹಾಗೂ ಲಕ್ಷ್ಮಣ ಸವದಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇನ್ನಿತರರ ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ವಿತ್ತೀಯ ಕಾರ್ಯಕಲಾಪಗಳಲ್ಲಿನ ಪ್ರಸಕ್ತ ಸಾಲಿನ ಅನುದಾನದ ಬೇಡಿಕೆಗಳನ್ನು ಮಂಡಿಸಿದರು. ಅಂತೆಯೇ, ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಆಡಳಿತಾರೂಢ ಹಾಗೂ ಪ್ರತಿಪಕ್ಷಗಳ ಸದನ ನಾಯಕರನ್ನು ಕಲಾಪ ಸಲಹಾ ಸಮಿತಿಯ ಸಭೆಗೆ ಆಹ್ವಾನಿಸಿದ ಸ್ಪೀಕರ್, ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಸದನವನ್ನು ಮಧ್ಯಾಹ್ನ 2 ಗಂಟೆ ವರೆಗೆ ಮುಂದೂಡಿದರು.

ಸಿದ್ದರಾಮಯ್ಯರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಹಾಗೂ ಸರಕಾರದ ಮುಖ್ಯ ಸಚೇತಕರಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್‌ರನ್ನು ಮಾನ್ಯ ಮಾಡಿರುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News