ವಿಧಿ ಇಲ್ಲದೇ ಕಲಾಪ ಸಲಹಾ ಸಮಿತಿ ಸಭೆಯಿಂದ ವಾಕ್ ಔಟ್: ಸಿದ್ದರಾಮಯ್ಯ
ಬೆಂಗಳೂರು, ಅ.10: ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು, ಬಜೆಟ್ ಮೇಲೆ ಚರ್ಚೆ ಮಾಡಬೇಕು. ಆದುದರಿಂದ, 10 ದಿನ ಅವಕಾಶ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಸರಕಾರ ಜಪ್ಪಯ್ಯ ಎಂದಿಲ್ಲ. ಆದುದರಿಂದ, ವಿಧಿ ಇಲ್ಲದೇ ಸದನ ಕಲಾಪ ಸಲಹಾ ಸಮಿತಿಯಿಂದ ನಾವು ವಾಕ್ ಔಟ್ ಮಾಡಬೇಕಾಯಿತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುರುವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಮಾತನಾಡಿದ ಅವರು, ಸದನ ಕಲಾಪ ಸಲಹಾ ಸಮಿತಿ ಸಭೆ ಕರೆದಿದ್ದ ನಿಮಗೆ(ಸ್ಪೀಕರ್) ಅಗೌರವ ತೋರಬೇಕು ಎಂಬುದು ನಮ್ಮ ಉದ್ದೇಶವಾಗಿರಲಿಲ್ಲ. ಆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅವಕಾಶ ಇಲ್ಲದೇ ಇರುವಾಗ ಏನು ಮಾಡಬೇಕು ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವು ಸಭೆಯಿಂದ ವಾಕ್ ಔಟ್ ಮಾಡಿದ್ದು ನನಗೆ ಗೊತ್ತಾಗಿಲ್ಲ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹಾಗಾದರೆ ನೀವೇ ಹೇಳಿ ಯಾವ ರೀತಿಯಲ್ಲಿ ವಾಕ್ ಔಟ್ ಮಾಡಬೇಕೆಂದು. ಮುಂದಿನ ದಿನಗಳಲ್ಲಿ ಅದೇ ರೀತಿ ಮಾಡುತ್ತೇವೆ ಎಂದರು.