ಬೆಂಗಳೂರು: ವೃದ್ಧ ದಂಪತಿಯ ಕೊಲೆ

Update: 2019-10-17 15:54 GMT

ಬೆಂಗಳೂರು, ಅ.17: ವೃದ್ದ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾತ್ರಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗರುಡಾಚಾರ್ ಪಾಳ್ಯದ ಆರ್‌ಎಚ್‌ಬಿ ಕಾಲನಿಯ ನಿವಾಸಿ ಚಂದ್ರೇಗೌಡ(63), ಅವರ ಪತ್ನಿ ಲಕ್ಷ್ಮಮ್ಮ (55) ಕೊಲೆಯಾದ ವೃದ್ಧ ದಂಪತಿ. ಈ ಕೊಲೆಗೆ ಸದ್ಯಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹಣ, ಆಭರಣಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀರು ಅನುಮಾನ ವ್ಯಕ್ತಪಡಿಸಿದ್ದಾರೆ.

ದುಷ್ಕರ್ಮಿಗಳು ರಾತ್ರಿ ದಂಪತಿಯ ಮನೆಗೆ ನುಗ್ಗಿ ಮನೆಯ ಹಾಲ್‌ನಲ್ಲಿ ಚಂದ್ರೇಗೌಡರನ್ನು ಹಾಗೂ ರೂಮ್‌ನಲ್ಲಿ ಲಕ್ಷ್ಮಮ್ಮರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಬೀರುಗಳ ಬಾಗಿಲು ತೆಗೆದು ಅಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಡಿ ಕೊನೆಗೆ ಮುಂಬಾಗಿಲಿನ ಚಿಲಕ ಹಾಕಿಕೊಂಡು ಪರಾಗಿಯಾಗಿದ್ದಾರೆ.

ಮೂಲತಃ ಕೆಆರ್ ಪೇಟೆ ತಾಲೂಕಿನವರಾದ ಚಂದ್ರೇಗೌಡ ಕಾರ್ಖಾನೆಯೊಂದರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಆರ್‌ಬಿಎಚ್ ಕಾಲನಿಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ಐದಾರು ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಇವರಿಗೆ ಸಾಕು ಮಗಳೊಬ್ಬರಿದ್ದು, ಈಗಾಗಲೇ ಮದುವೆ ಮಾಡಿ ಕೊಡಲಾಗಿದೆ.

ಈ ಬಗ್ಗೆ ಮಹದೇವಪುರ ಠಾಣೆ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಜೋಡಿ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಡಿಸಿಪಿ ಅನುಚೇತ್ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News