ಪೊಲೀಸರಿಗೆ ದೀಪಾವಳಿ ಉಡುಗೊರೆ: ವೇತನ ಶ್ರೇಣಿ ಪರಿಷ್ಕರಣೆ, ಕಷ್ಟ ಪರಿಹಾರ ಭತ್ತೆ ಹೆಚ್ಚಳ
ಬೆಂಗಳೂರು, ಅ.19: ದೀಪಾವಳಿ ಉಡುಗೊರೆಯಾಗಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ವೇತನ ಶ್ರೇಣಿಯ ಪರಿಷ್ಕರಣೆ ಹಾಗೂ ಕಷ್ಟ ಪರಿಹಾರ ಭತ್ತೆಯನ್ನು ಹೆಚ್ಚಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.
ಪೊಲೀಸ್ ಅಧಿಕಾರಿ ಹಾಗೂ ನೌಕರರ ವೇತನ ಶ್ರೇಣಿ ಪರಿಷ್ಕರಣೆಯನ್ನು ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿಯ ವರದಿಯಂತೆ ಜಾರಿ ಮಾಡಿದ್ದು, ಇದರ ಜತೆಗೆ, ಕಷ್ಟ ಪರಿಹಾರ ಭತ್ತೆಯನ್ನೂ ಹೆಚ್ಚಿಸಲಾಗಿದೆ. 2019ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ದೀಪಾವಳಿ ಉಡುಗೊರೆ ಮತ್ತು ಪೊಲೀಸ್ ಹುತಾತ್ಮ ದಿನದ ಮುನ್ನಾ ದಿನ ಈ ಆದೇಶ ಹೊರ ಬಿದ್ದಿದೆ.
ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಈಗಿರುವ ಕಷ್ಟ ಪರಿಹಾರ ಭತ್ತೆಯ ಜತೆಗೆ ಹೆಚ್ಚುವರಿಯಾಗಿ ರೂ.1,000 ಮಂಜೂರು ಮಾಡಲಾಗಿದೆ.
ಈ ವರದಿ ಜಾರಿಯಿಂದಾಗಿ ಹೊಸದಾಗಿ ಸೇರುವ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಈಗ ಇರುವ ರೂ.30,427(ಎಲ್ಲ ಭತ್ತೆಗಳು ಸೇರಿ) ಒಟ್ಟು ಮಾಸಿಕ ವೇತನದ ಬದಲು ರೂ.34,267(ಎಲ್ಲ ಭತ್ತೆಗಳು ಸೇರಿ)ಕ್ಕೆ ಲಭಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.