ನೇಪಾಳಿ ಯುವಕರ ಕಳ್ಳ ಸಾಗಾಟ ಆರೋಪ: ಇಬ್ಬರ ಬಂಧನ
Update: 2019-10-22 14:02 GMT
ಬೆಂಗಳೂರು, ಅ.22: ನೇಪಾಳ ಮೂಲದ ಯುವಕರನ್ನು ಮಾನವ ಕಳ್ಳ ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 9 ಯುವಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೇಪಾಳ ಮೂಲದ ಶಂಭುಗಿರಿ ಮತ್ತು ಆರ್.ಪಿ.ಶರ್ಮ ಎಂಬುವರು ಬಂಧಿತ ಆರೋಪಿಗಳು ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಶಂಭುಗಿರಿ ಎಂಬಾತ ಚಿಕ್ಕಜಾಲ ಪೊಲೀಸ್ ಠಾಣಾ ಸರಹದ್ದಿನ ಗ್ರೀನ್ ಲೀಫ್ ಹೆಸರಿನ ಖಾಸಗಿ ವಸತಿ ಗೃಹದಲ್ಲಿ ಉಳಿದುಕೊಂಡು ನೇಪಾಳದಿಂದ ಅಮಾಯಕ ಯುವಕರನ್ನು ಕರೆಸಿಕೊಂಡು, ಉದ್ಯೋಗ ನೀಡುವ ನೆಪದಲ್ಲಿ ನಂಬಿಸುತ್ತಿದ್ದ. ಜೊತೆಗೆ ಅವರಿಂದ ಹಣ ಪಡೆದು ಆರ್.ಪಿ ಶರ್ಮ ಎಂಬುವವರ ಮುಖಾಂತರ ಹೊರದೇಶಗಳಿಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.