ನವೆಂಬರ್ ಅಂತ್ಯದೊಳಗೆ ರಸ್ತೆ ಗುಂಡಿ ಮುಚ್ಚಿ, ಇಲ್ಲವೇ ಕಡ್ಡಾಯ ರಜೆ ಮೇಲೆ ತೆರಳಿ: ಡಿಸಿಎಂ ಸೂಚನೆ

Update: 2019-11-04 13:50 GMT

ಬೆಂಗಳೂರು. ನ.4: ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಎಲ್ಲ ರಸ್ತೆಗಳ ಗುಂಡಿಮಚ್ಚುವ ಕಾರ್ಯ ನ.30ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಎಂಜಿನಿಯರ್‌ಗಳ ಕಾರ್ಯನಿರ್ವಹಣ ವರದಿ(ಸಿಆರ್)ಯಲ್ಲಿ ಅವರ ಅಸಾಮರ್ಥ್ಯತೆ ಕುರಿತು ನಮೂದಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಯೋಜನೆಗಳ ಪ್ರಗತಿ, ಅಪೆಂಡಿಕ್ಸ್ ಇ, ರಸ್ತೆ ಮತ್ತು ಸೇತುವೆ, ಕಟ್ಟಡ ಮುಂದುವರೆದ ಹಾಗೂ ಹೊಸರಸ್ತೆ ಮತ್ತು ಸೇತುವೆ ಕಾಮಗಾರಿಗಳ ಕುರಿತು ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಸಂಭವಿಸಿದ ನೆರೆ ಹಾವಳಿ, ಭೀಕರ ಮಳೆಯಿಂದ ರಸ್ತೆಗಳು ದುರಸ್ಥಿಗೆ ಬಂದಿದ್ದು, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಗಳ ನಿರ್ಮಾಣ ಹಾಗು ನಿರ್ವಹಣೆ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಪಾರದರ್ಶಕ ಕಾಯ್ದೆಯ ವಿನಾಯಿತಿ ನೀಡಲಾಗಿದೆ. ನೆಪಹೇಳದೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.

ಮಾರ್ಚ್ ಅಂತ್ಯದೊಳಗೆ ಯೋಜನಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು. ಕಟ್ಟಡ ನಿರ್ಮಾಣ ಯೋಜನೆಯಡಿ 1,500 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. 800 ಕೋಟಿ ರೂ. ವೆಚ್ಚದ ಕೋರ್ಟ್ ಕಟ್ಟಡ ಕಾಮಗಾರಿಗಳೂ ಪ್ರಗತಿ ಹಂತದಲ್ಲಿವೆ. ಕೋರ್ಟ್ ಕಟ್ಟಡ ನಿರ್ಮಾಣ ಕುರಿತ ಪ್ರಸ್ತಾವನೆಗಳು ಬಂದಿವೆ.

ಐವತ್ತು ಇಲಾಖೆಗಳಿಗೆ ಪ್ರತ್ಯೇಕ ಬಜೆಟ್ ಹಂಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ಇಲಾಖೆಗಳ ಕಟ್ಟಡ ನಿರ್ಮಾಣ ಯೋಜನೆಗೆ ಸಂಬಂಧಿಸಿದ ಇಲಾಖೆಯ ಅನುದಾನದಲ್ಲೇ ನಿರ್ಮಾಣ ಮಾಡಬೇಕು. ನಿವೇಶನ ಇಲ್ಲದ ಯಾವುದೇ ಇಲಾಖೆಗಳ ಕಟ್ಟಡ ನಿರ್ಮಾಣ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬಾರದು. ಈ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಅನುದಾನ ಬಳಕೆ ಮಾಡಬಾರದು. ನೀಲನಕ್ಷೆಗೆ ಅನುಗುಣವಾಗಿ ಕಟ್ಟಡ ನಿರ್ಮಿಸಬೇಕು ಎಂದರು.

ಆರ್ಥಿಕ ಇಲಾಖೆ ಸಹಮತವಿಲ್ಲದ ಯಾವುದೆ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಬಾರದು. ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಅಪೆಂಡಿಕ್ಸ್-ಇ ಯೋಜನೆಯಡಿ ಕಾಮಗಾರಿಗಳ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುವುದು ಎಂದರು. ಇಲಾಖೆಯ ಈಶಾನ್ಯ ವಲಯದ ವ್ಯಾಪ್ತಿಯಲ್ಲಿ 5,058 ಕಿ.ಮೀ. ರಾಜ್ಯ ಹೆದ್ದಾರಿ, 8,373 ಕಿ.ಮೀ. ಜಿಲ್ಲಾ ಮುಖ್ಯರಸ್ತೆಗಳಿದ್ದು, 1,068 ವಸತಿ, 833 ವಸತಿಯೇತರ ಕಟ್ಟಡಗಳಿವೆ. 2019-20ನೆ ಸಾಲಿನ ವಾರ್ಷಿಕ ಅನುದಾನ ಯೋಜನೆಯಡಿ 1,066 ಕೋಟಿ ರೂ.ನಲ್ಲಿ 313 ಕೋಟಿ ರೂ.ಖರ್ಚು ಮಾಡಲಾಗಿದೆ.

ರಸ್ತೆ ಮತ್ತು ಸೇತುವೆಗಳ ಮುಂದುವರೆದ ಹಾಗೂ ಹೊಸ ಅಪೆಂಡಿಕ್ಸ್-ಇ ಕಾಮಗಾರಿಗಳ ಯೋಜನೆಯಡಿ 1,431ಕೋಟಿ ರೂ.ವೆಚ್ಚದ 711 ಸ್ಪಿಲ್ ಓವರ್ ಕಾಮಗಾರಿಗಳಿದ್ದು, 344ಕೋಟಿ ರೂ.ವೆಚ್ಚದ 151ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.

ಆ ಪೈಕಿ 836 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದ್ದು, 303 ಕಾಮಗಾರಿಗಳು ಪೂರ್ಣಗೊಂಡಿವೆ. 126 ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ ಕಾಮಗಾರಿಗಳ ತಾಂತ್ರಿಕ ಅನುಮೋದನೆ ಹಾಗೂ ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಇಲಾಖೆ ಹಾಗೂ ಕೋರ್ಟ್ ಕಟ್ಟಡ ಕಾಮಗಾರಿ ಯೋಜನೆ ಅಡಿ 367ಕೋಟಿ ರೂ.ವೆಚ್ಚದ 75 ಕಾಮಗಾರಿಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಅವುಗಳಲ್ಲಿ 21 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ರುದ್ರಭೂಮಿ, ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಇಲಾಖೆಯು ಅನುಷ್ಟಾನಗೊಳಿಸಬಾರದು. ಸಾರ್ವಜನಿಕ ಆಸ್ತಿಯಾಗಿ ರೂಪುಗೊಳ್ಳುವ ಕಾಮಗಾರಿ ಕೈಗೊಂಡು ಇಲಾಖೆಯ ಘನತೆ ಹೆಚ್ಚಿಸಬೇಕು. ಎಂಜಿನಿಯರ್ ಸಮುದಾಯಕ್ಕೆ ಗೌರವ ಹೆಚ್ಚಿಸುವ ಕೆಲಸ ಅನುಷ್ಟಾನ ಗೊಳಿಸಬೇಕು ಎಂದು ಸೂಚಿಸಿದರು.

ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಗುರುಪ್ರಸಾದ್, ಡಿಸಿಎಂ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ, ಎಲ್ಲ ವಲಯಗಳ ಮುಖ್ಯ ಇಂಜಿನಿಯರ್‌ಗಳು, ಅಧೀಕ್ಷಕ ಇಂಜಿನಿಯರ್‌ಗಳು ಸಭೆಯಲ್ಲಿ ಹಾಜರಿದ್ದರು.

‘ಎಸ್ಸಿಪಿ-ಟಿಎಸ್ಪಿ ಯೋಜನೆಯ ಕಾಮಗಾರಿಗಳನ್ನು ಶೇ.100 ಅನುಷ್ಠಾನಗೊಳಿಸಿ, ಯಾವುದೇ ಅನುದಾನ ಉಳಿಕೆಯಾಗಬಾರದು. ಸಿಎಂ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯಡಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಗತ್ಯವಿರುವ ಕಡೆ 20 ರಿಂದ 30 ಸ್ಥಳಗಳಲ್ಲಿ ಹೊಸ ಪ್ರವಾಸಿ ಮಂದಿರಗಳನ್ನು ನಿರ್ಮಿಸಬೇಕು. ಈಗಾಗಲೇ ನಿರ್ಮಿಸಿರುವ ಪ್ರವಾಸಿ ಮಂದಿರಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಅಗತ್ಯ ಸಿಬ್ಬಂದಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು’

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News