ಪಕ್ಷ ತೊರೆದವರು ಕೆಟ್ಟ ಅನುಭವವಾಗಿ ಹಿಂದಿರುಗಿದ ಉದಾಹರಣೆಗಳಿವೆ: ಸಚಿವ ಸಿ.ಟಿ.ರವಿ

Update: 2019-11-11 14:20 GMT

ಬೆಂಗಳೂರು, ನ. 11: ಹದಿನೈದು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟುಹೋಗುವ ನಾಯಕರು ಮತ್ತೆ ವಾಪಸ್ ಬರುತ್ತಾರೆ. ಪಕ್ಷ ತೊರೆದು ಹೋದವರಿಗೆ ಕೆಟ್ಟ ಅನುಭವವಾಗಿ ಹಿಂದಿರುಗಿರುವ ಉದಾಹರಣೆಗಳಿವೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಆ ಪಕ್ಷದ ನಾಯಕರೇ ಬಿಜೆಪಿಗೆ ಬರುತ್ತಿದ್ದಾರೆ. ಆದರೆ, ಇಂದು ಕೆಲವರು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೋಗುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತದ ಮೇಲೆ ನಿಂತಿದ್ದು, ಎಲ್ಲರಿಗೂ ಸಮಾನ ಅವಕಾಶ ಲಭಿಸುತ್ತದೆ ಎಂದು ಹೇಳಿದರು.

ಅನರ್ಹ ಶಾಸಕರ ಬಗ್ಗೆ ಬುಧವಾರ ಸುಪ್ರೀಂ ಕೋರ್ಟ್‌ತೀರ್ಪು ಬರಲಿದ್ದು, ಆ ಬಳಿಕ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಕೋರ್ಟ್ ತೀರ್ಪಿನ ಮೇಲೆ ಉಪಚುನಾವಣೆ ನಡೆಯುವುದು ನಿರ್ಧಾರವಾಗಲಿದೆ ಎಂದರು.

ಶರತ್ ಬಚ್ಚೇಗೌಡ ಮತ್ತು ಅವರ ಕುಟುಂಬಕ್ಕೆ ಪಕ್ಷ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ನನ್ನ ಕಿರಿಯ ಸಹೋದರನಂತಿರುವ ಶರತ್ ಚಿಂತಿಸಬೇಕಿದೆ. ಇಂದು ವೈಯಕ್ತಿಕ ಹಿನ್ನೆಲೆಯಲ್ಲಿ ಮಾಡಿದಂತಹ ತೀರ್ಮಾನ ಆಗಬಾರದು. ಮುಂದಿನ 40 ವರ್ಷಗಳ ರಾಜಕೀಯ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಅವರು ಪಕ್ಷದ ನಿರ್ಧಾರ ಒಪ್ಪಬೇಕು ಎಂದು ನಾನು ಅವರಿಗೆ ಸಲಹೆ ಮಾಡುವೆ ಎಂದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 100 ದಿನಗಳ ಮಾತ್ರ ಆಗಿದೆ. ಪೂರ್ಣ ಬಹುಮತ ಪಡೆದು ನಾವು ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಆಶ್ವಾಸನೆಗಳನ್ನು ಈಡೇರಿಸಲೇಬೇಕು. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಎಸಿಬಿ ವಿಚಾರವನ್ನೂ ನಾವು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News