ಬೆಂಗಳೂರು: ‘10ನೇ ಅಂತರಾಷ್ಟ್ರೀಯ ಬಹುಶಿಸ್ತೀಯ ಸಮಾವೇಶ-2019’ಕ್ಕೆ ತೆರೆ

Update: 2019-11-12 16:47 GMT

ಬೆಂಗಳೂರು, ನ.12: ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘10ನೇ ಅಂತರ್‌ರಾಷ್ಟ್ರೀಯ ಬಹುಶಿಸ್ತೀಯ ಸಮಾವೇಶ-2019’ಕ್ಕೆ ಮಂಗಳವಾರ ತೆರೆಬಿದ್ದಿತು.

ಎರಡು ದಿನಗಳ ಕಾಲ ನಡೆದ ಸಮ್ಮೇಳನವು ಉನ್ನತ ಶಿಕ್ಷಣದಲ್ಲಿನ ಹಲವು ಸಮಸ್ಯೆಗಳನ್ನು ಹಾಗೂ ಶಿಕ್ಷಣಕ್ಕಿರುವ ಸವಾಲುಗಳ ಬಗ್ಗೆ ಚರ್ಚಿಸಲು ಸಮಾವೇಶ ವೇದಿಕೆಯಾಗಿತ್ತು. ಬುಡಕಟ್ಟು ಶಿಕ್ಷಣ, ಹೊಸ ಪಠ್ಯಗಳ ಅಳವಡಿಕೆ, ಮಹಿಳಾ ಶಿಕ್ಷಣ ಹಾಗೂ ಉದ್ಯೋಗ, ವಿಕಲಾಂಗ ಚೇತನ ಮಕ್ಕಳ ಶೈಕ್ಷಣಿಕ ಸಮಸ್ಯೆ, ಕಾಲೇಜು ಶಿಕ್ಷಣದ ಸುಧಾರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಲಾಯಿತು.

ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಮಾತನಾಡಿದ ಉಪನ್ಯಾಸಕ ಚಂದ್ರೇಗೌಡ, ಆಧುನಿಕ ಕಾಲಘಟ್ಟದಲ್ಲಿ ಅತ್ಯಂತ ವೇಗವಾಗಿ ತಂತ್ರಜ್ಞಾನ ಬೆಳವಣಿಗೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸುಲಭವಾದ ಮಾರ್ಗದಲ್ಲಿ ಬೋಧನೆ ಮಾಡುವ ಅಗತ್ಯವಿದೆ ಎಂದು ನುಡಿದರು.

ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣದಲ್ಲಿ ಪಠ್ಯವನ್ನಷ್ಟೇ ಅಲ್ಲದೆ, ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸಬೇಕಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುತ್ತಾರೆ. ಕಾಲೇಜು ಶಿಕ್ಷಣದಲ್ಲಿ ಅದರ ಪ್ರಮಾಣ ಕಡಿಮೆ ಮಾಡಲಾಗುತ್ತದೆ ಎಂದರು.

ಶಿಕ್ಷಣದಲ್ಲಿ ರೋಬೋ ಸಂಸ್ಕೃತಿ ನುಸುಳಬಾರದು. ಕ್ರಿಯಾಶೀಲ ಶಿಕ್ಷಣಕ್ಕೆ ಮತ್ತಷ್ಟು ಒತ್ತು ನೀಡಬೇಕು. ಆಗ ಮಾತ್ರ ಮಕ್ಕಳ ಶಿಕ್ಷಣಕ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆ ಹೊಂದಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ರಾಯಚೂರಿನ ಹೇಮರೆಡ್ಡಿ ಬಿಎಡ್ ಕಾಲೇಜಿನ ಪ್ರಾಂಶುಪಾಲ ಚನ್ನಬಸಪ್ಪ ವಿಶೇಷ ಚೇತನ ಮಕ್ಕಳ ಸಮಸ್ಯೆಗಳ ಬಗ್ಗೆ ಮಾತನಾಡಿ, ವಿಶೇಷ ಚೇತನರು ಓದಲು ಇಷ್ಟವಿದ್ದರೂ, ಕಾರಣಾಂತರಗಳಿಂದ ಶಿಕ್ಷಣದಿಂದ ದೂರ ಉಳಿಯುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶಗಳು ಸಿಗುವಂತಾಗಬೇಕು ಎಂದು ನುಡಿದರು.

ಉನ್ನತ ಶಿಕ್ಷಣದಲ್ಲಿ ಓದುತ್ತಿರುವ ವಿಶೇಷ ಚೇತನ ಮಕ್ಕಳಲ್ಲಿ ಹಿಂಜರಿಕೆಯಿರುವುದು ಕಂಡು ಬಂದಿದೆ. ಇಂತಹ ಮಕ್ಕಳಲ್ಲಿ ಧನಾತ್ಮಕ ಅಂಶಗಳನ್ನು ತುಂಬಬೇಕಾದ ಅಗತ್ಯವಿದೆ ಎಂದ ಅವರು, ಈ ಬಗ್ಗೆ ಸಂಶೋಧನೆ ಮೂಲಕ ಅಧ್ಯಯನ ಮಾಡಲಾಗಿದೆ. ಹೀಗಾಗಿ ಮಕ್ಕಳಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ರೂಪಿಸಬೇಕಾಗಿದೆ ಎಂದು ಮನವಿ ಮಾಡಿದರು.

ನಗರದಲ್ಲಿ ನಡೆದ ಎರಡು ದಿನಗಳ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮೈಸೂರು, ಬೆಂಗಳೂರು, ರಾಯಚೂರು, ಕಲಬುರಗಿ, ದಾವಣಗೆರೆ ವಿವಿಧಡೆಗಳಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು ಆರು ನೂರು ಮಂದಿ ಭಾಗವಹಿಸಿದ್ದರು. ಆಪ್ಘಾನಿಸ್ತಾನ, ಇಂಡೋನೇಷಿಯಾ, ಯೆಮನ್ ಸೇರಿದಂತೆ ಹಲವು ದೇಶಗಳ ಶಿಕ್ಷಣ ತಜ್ಞರು ಪಾಲ್ಗೊಂಡಿದ್ದರು ಎಂದು ಆಯೋಜಕರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News